ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಮಾದೇಶ ಚಿತ್ರ ನಿರ್ಮಾಪಕ
ಬೆಂಗಳೂರು, ಅ. 7 : ನಗರದ ಹೊರವಲಯದ ಬಾಗಲೂರಿನ ಫಾರಂಹೌಸೊಂದರಲ್ಲಿ ವ್ಯಕ್ತಿಯೊಬ್ಬನನ್ನು ಶಿವರಾಜ್ ಕುಮಾರ್ ನಟನೆಯ 'ಮಾದೇಶ' ಚಿತ್ರ ನಿರ್ಮಾಪಕ ಗೋವರ್ಧನ್ ರೆಡ್ಡಿ ಹಾಗೂ ಆತನ ಅಂಗರಕ್ಷಕರು ಸೋಮವಾರ ಮಧ್ಯರಾತ್ರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಕೊಂಡಿದ್ದ ವಿನೋದ್ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ವಿನೋದ್ ಹೊಟ್ಟೆಗೆ ಗುಂಡು ಹೊಕ್ಕಿದ್ದ ಹಿನ್ನೆಲೆಯಲ್ಲಿ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ವಿನೋದ್ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಚಿಕ್ಕಬಳ್ಳಾಪುರದಲ್ಲಿರುವ ಜಮೀನಿನ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದ ವಿನೋದ್ ಆತನ ಸ್ನೇಹಿತ ಶಂಕರರೆಡ್ಡಿ ಎಂಬಾತನೊಂದಿಗೆ ಬಾಗಲೂರಿನ ಫಾರಂಹೌಸ್ ನಲ್ಲಿ ಪಾರ್ಟಿಗೆ ತೆರಳಿದ್ದಾರೆ. ಅಲ್ಲಿಗೆ ಮಾದೇಶ ಚಿತ್ರ ನಿರ್ಮಾಪಕ ಗೋವರ್ಧನ್ ರೆಡ್ಡಿ ಹಾಗೂ ಅವರ ಅಂಗರಕ್ಷಕರು ಪಾರ್ಟಿಯಲ್ಲಿ ಕೂಡಿಕೊಂಡಿದ್ದಾರೆ.
ಭೂವಿವಾದಕ್ಕೆ ಸಂಬಂಧಿಸಿದಂತೆ ಗೋವರ್ಧನರೆಡ್ಡಿ ಹಾಗೂ ವಿನೋದ್ ನಡುವೆ ಮಾತಿನ ಚಕಮಕಿ ನಡೆದಿದೆ. ಈಗ ವಿನೋದ್ ಮೇಲೆ ಗುಂಡು ಹಾರಿಸಲಾಗಿದೆ. ಮಧ್ಯರಾತ್ರಿ ಎಲ್ಲರೂ ಪಾನಮತ್ತರಾಗಿದ್ದರು ಎಂದು ತಿಳಿದು ಬಂದಿದೆ. ವಿನೋದ್ ಸಂಬಂಧಿಕರಾದ ಶ್ರೀನಿವಾಸ್ ಅವರು ಕೂಡಾ ನಿರ್ಮಾಪಕ ಗೋವರ್ಧನರೆಡ್ಡಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಗೋವರ್ಧನರೆಡ್ಡಿ ಹಾಗೂ ಆತನ ಅಂಗರಕ್ಷಕರು ತಲೆಮರೆಸಿಕೊಂಡಿದ್ದಾರೆ. ಬಾಗಲೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಸಿಪಿ ಮಾಲಗತ್ತಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications