ಅಗರ್ತಲಾದಲ್ಲಿ ಸರಣಿ ಸ್ಫೋಟ, ನಾಲ್ಕು ಸಾವು
ಅಗರ್ತಲಾ, ಅ.2: ಬಾಂಗ್ಲಾ ದೇಶದ ಗಡಿಗೆ ಸನಿಹದಲ್ಲಿರುವ ತ್ರಿಪುರ ರಾಜಧಾನಿ ಅಗರ್ತಲಾದಲ್ಲಿ ಬುಧವಾರ ಸಂಜೆ ನಾಲ್ಕು ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿ ನಾಲ್ಕು ಮಂದಿ ಬಲಿಯಾಗಿದ್ದಾರೆ. ಸ್ಫೋಟದಲ್ಲಿ 100 ಮಂದಿಗೂ ಅಧಿಕ ಜನ ಗಾಯಗೊಂಡಿದ್ದಾರೆ.
ಸಂಜೆ 7.30ರ ಸುಮಾರಿಗೆ ರಾಧಾನಗರ್ ಬಸ್ ನಿಲ್ದಾಣದಲ್ಲಿ ಮೊದಲ ಸ್ಫೋಟ ಸಂಭವಿಸಿತು. ಇದಾದ ಕೆಲವೇ ನಿಮಿಷಗಳಲ್ಲಿ ನಗರದ ಕೇಂದ್ರ ಭಾಗ ಮಹಾರಾಜಗಂಜ್ ಬಜಾರ್ ನಲ್ಲಿ ಮತ್ತೊಂದು ಸ್ಫೋಟ ಸಂಭವಿಸಿತು. ಇನ್ನೆರಡು ಕಡೆಗಳಲ್ಲಿ ಸಜೀವ ಬಾಂಬ್ ಗಳು ಪತ್ತೆಯಾದವು.
ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಅದರ ಸನಿಹವೇ ಇರುವ ಜಿ.ಬಿ.ಬಜಾರ್ ಬಳಿ ಮತ್ತೊಂದು ಸ್ಫೋಟ ಸಂಭವಿಸಿತು. ರಾಜಧಾನಿಯ ಹೊರಭಾಗದಲ್ಲಿರುವ ಕಥಿಬಾಬಾ ಮಂದಿರದ ಬಳಿ ನಾಲ್ಕನೆಯ ಸ್ಫೋಟ ಸಂಭವಿಸಿತು. ಈ ಸರಣಿ ಬಾಂಬ್ ಸ್ಫೋಟದಿಂದ ಅಗರ್ತಲಾದ ಜನತೆ ಭಯಭೀತರಾದರು. ದೂರವಾಣಿ ಸಂಪರ್ಕಗಳು ಸಂಪೂರ್ಣ ಸ್ಥಗಿತಗೊಂಡ ಕಾರಣ ತಮ್ಮ ಸಂಬಂಧಿಕರನ್ನು ಸಂಪರ್ಕಿಸಲು ಜನ ಪರದಾಡುವಂತಾಯಿತು.
ಬಾಂಬ್ ಸ್ಫೋಟದ ಹೊಣೆಯನ್ನು ಯಾವ ಉಗ್ರವಾದಿ ಸಂಘಟನೆಯೂ ಹೊತ್ತಿಕೊಂಡಿಲ್ಲ ಬಾಂಗ್ಲಾ ಮೂಲದ ಇಸ್ಲಾಮಿಕ್ ಸಂಘಟನೆ ಹರ್ಕತ್ ಉಲ್ ಜಿಹಾದಿ ಇ ಇಸ್ಲಾಮಿ (ಹೂಜಿ) ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈಶಾನ್ಯ ರಾಜ್ಯಗಳ ಮೇಲೆ ಉಗ್ರಗಾಮಿಗಳು ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಸಿಬಿಐ ಎಚ್ಚರಿಕೆ ನೀಡಿತ್ತು.
ನಾಲ್ಕು ಮಂದಿ ಬಂಧನ
ಸ್ಫೋಟ ಸಂಭವಿಸಿದಾಗ ಸ್ಥಳದಲ್ಲೆ ಬೈಕ್ ನಲ್ಲಿದ್ದ ಓರ್ವ ಅನುಮಾನಾಸ್ಪದ ವ್ಯಕ್ತಿ ಸೇರಿದಂತೆ ನಾಲ್ಕು ಮಂದಿಯನ್ನು ಅಗರ್ತಲ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ. ರಾಧಾನಗರ ಬಸ್ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿದಾಗ ಈ ಅನುಮಾನಾಸ್ಪದ ವ್ಯಕ್ತಿ ಅಲ್ಲೆ ಬೈಕ್ ನಲ್ಲಿರುವುದನ್ನು ಗಮನಿಸಿ ಆತನನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ.
(ಏಜೆನ್ಸೀಸ್)












Click it and Unblock the Notifications