ಗಣಿಗಾರಿಕೆಗೆ ವಿಗ್ರಹ ಸ್ಥಳಾಂತರ, ಉದ್ವಿಗ್ನ ಪರಿಸ್ಥಿತಿ
ಚಾಮರಾಜನಗರ, ಸೆ. 25 : ಗಣಿಗಾರಿಕೆಗೆ ಅಡ್ಡಿಯಾಗಿರುವ ಬಸವಮೂರ್ತಿಯನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಿರುವ ಕ್ರಮಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮದಲ್ಲಿ ನಡೆದ ಈ ಘಟನೆ ಹಿನ್ನೆಲೆಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.
ಅನ್ವರ್ ಪಾಷಾ ಎಂಬುವವರು ಕೆಲ ದಿನಗಳ ಹಿಂದೆ ಕರಿಕಲ್ಲು ಗಣಿಗಾರಿಕೆ ಮಾಡುವ ಸಲುವಾಗಿ ಸ್ಥಳದಲ್ಲಿದ್ದ ಬಸವಮೂರ್ತಿ ಎತ್ತಂಗಡಿ ಮಾಡಲು ಮುಂದಾಗಿದ್ದರು. ಇದಕ್ಕೆ ಗುಂಬಳ್ಳಿ ಗ್ರಾಮದ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಬುಧವಾರ ರಾತ್ರಿ ಅನ್ವರ್ ಪಾಷಾ ಅವರ ಬೆಂಬಲಿಗರು ಏಕಾಏಕಿ ಬಸವಮೂರ್ತಿಯನ್ನು ಬೇರೆಡೆಗೆ ಸ್ಥಳಾಂತರಿಸಿದ್ದರು. ಇದರಿಂದ ಆಕ್ರೋಶ ಭರಿತರಾದ ಗ್ರಾಮದ ಜನರು ಗಣಿ ಮಾಲೀಕರ ವಿರುದ್ಧ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಡಿವೈಎಸ್ ಪಿ ನಾರಾಯಣ ಪರಿಸ್ಥಿತಿ ತಿಳಿಗೊಳಿಸಲು ಮುಂದಾದರು. ಆದರೆ ಗ್ರಾಮಸ್ಥರು ಬಸವಮೂರ್ತಿಯನ್ನು ಮೊದಲಿನ ಸ್ಥಳದಲ್ಲಿ ತಂದು ಪ್ರತಿಷ್ಠಾಪಿಸಬೇಕು ಎಂದು ಪಟ್ಟುಹಿಡಿದರು. ನಂತರ ಗ್ರಾಮಸ್ಥರನ್ನು ಮನವೊಲಿಸಿ ಬೇರೆಡೆಗೆ ಸಾಗಿಸಿದ್ದ ಮೂರ್ತಿಯನ್ನು ಮೊದಲಿನ ಸ್ಥಳದಲ್ಲಿ ಇಡಲಾಯಿತು. ಹಾಗೂ ಮೂರ್ತಿಗೆ ಮಂಟಪವನ್ನು ಕಟ್ಟಿಸಿಕೊಡುವುದಾಗಿ ಅನ್ವಯ ಪಾಷಾ ಒಪ್ಪಿಕೊಂಡರು. ಸದ್ಯ ಪರಿಸ್ಥಿತಿ ಸಂಪೂರ್ಣ ಶಾಂತವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)