ಅಕ್ಟೋಬರ್ 17ರಂದು ಕಾವೇರಿ ತೀರ್ಥೋದ್ಭವ
ಮಡಿಕೇರಿ, ಸೆ.25: ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಅಕ್ಟೋಬರ್ 17ರಂದು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ತೀರ್ಥೋದ್ಭವವಾಗಲಿದೆ ಎಂದು ಮಡಿಕೇರಿ ಜಿಲ್ಲಾಡಳಿತ ತಿಳಿಸಿದೆ.
ಕಾರ್ಯಕ್ರಮದ ಏರ್ಪಾಟುಗಳು, ಭದ್ರತಾ ವ್ಯವಸ್ಥೆ ಬಗ್ಗೆ ಚರ್ಚಿಸಲು ಅಧಿಕಾರಿಗಳು, ಸಾರ್ವಜನಿಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಉನ್ನತ ಸಭೆಯನ್ನು ಗುರುವಾರ ಕರೆಯಲಾಗಿತ್ತ್ತು. ಸಭೆಯಲ್ಲಿ ಉಪ ಜಿಲ್ಲಾಯುಕ್ತ ಕೆ.ಆರ್.ನಿರಂಜನ್ ತೀರ್ಥೋದ್ಭವದ ವಿಷಯವನ್ನು ಪ್ರಕಟಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ಈ ವಿಶೇಷ ಸಂದರ್ಭದಲ್ಲಿ ದುಬೈ ಮೂಲದ ಕಾವೇರಿ ಸಂಘದ ಅಧ್ಯಕ್ಷರಾದ ಅರುಣ್ ಕಾರ್ಯಪ್ಪ ರು. 2.5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೇವರಿಗೆ ಸಮರ್ಪಿಸಲಿದ್ದಾರೆ. ಪವಿತ್ರ ತೀರ್ಥೋದ್ಭವಕ್ಕೆ ದೇಶದ ಮೂಲೆಮೂಲೆಗಳಿಂದ ಬರುವ ಯಾತ್ರಾರ್ಥಿಗಳಿಗೆ ಉಚಿತ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಚಟ್ಟಿಯಾರ್ ಗಳು, ಮಂಡ್ಯ ರೈತ ಸಂಘ, ಕೊಡವ ಸಮಾಜ ಮತ್ತು ಏಕೀಕರಣ ರಂಗ ಯಾತ್ರಾರ್ಥಿಗಳ ಸೇವೆಗೆ ಸಿದ್ಧವಾಗಿವೆ.
ಕಾನೂನು ಸುವ್ಯವಸ್ಥೆ ಭಂಗ ಬಾರದಂತೆ ಪೊಲೀಸರಿಗೆ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ಅಧಿಕಾರಿ ಸುರೇಶ್ ಅವರು ಸಮಿತಿಯನ್ನು ವಿನಂತಿಸಿಕೊಂಡರು. ಇದೇ ಸಂದರ್ಭದಲ್ಲಿ ಭಕ್ತಾದಿಗಳ ನಿಯಂತ್ರಣಕ್ಕೆ ಅಲ್ಲಲ್ಲಿ ಬ್ಯಾರಿಕೇಡ್ ಗಳನ್ನು ಏರ್ಪಡಿಸಲು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಲಾಯಿತು.
(ದಟ್ಸ್ ಕನ್ನಡ ವಾರ್ತೆ)