ಗುಜರಾತ್ ದಿಕ್ಕಿಗೆ ಚಲಿಸಿದ ನ್ಯಾನೊ ಕಾರು ?
ಬೆಂಗಳೂರು, ಸೆ. 25 : ಧಾರವಾಡಕ್ಕೆ ನ್ಯಾನೋ ಕಾರ್ ಘಟಕ ಸ್ಫಾಪಿಸಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲು ಮುಂದಾಗಿರುವ ಬೆನ್ನಲ್ಲೇ ನಿರಾಶೆ ಸುದ್ದಿಯೊಂದು ಹೊರಬಿದ್ದಿದೆ. ಸಿಂಗೂರಿನಲ್ಲಿರುವ ನ್ಯಾನೋ ಕಾರು ಘಟಕವನ್ನು ಗುಜರಾತಿಗೆ ಸ್ಥಳಾಂತರಿಸಲು ಟಾಟಾ ಕಂಪನಿ ನಿರ್ಧರಿಸಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ನ್ಯಾನೊ ಘಟಕ ಸ್ಫಾಪಿಸಲು ಮುಂದಾದರೆ ಸರ್ಕಾರ ಎಲ್ಲ ರೀತಿ ಸಹಕಾರಕ್ಕೂ ಸಿದ್ಧ ಎಂದು ಹೇಳಿಕೆ ನೀಡಿದ್ದರು. ಕಂಪನಿಗೆ ಬೇಕಿರುವ ಅಗತ್ಯ ಸೌಲಭ್ಯ ಹಾಗೂ 1000 ಎಕರೆ ಭೂಮಿಯನ್ನು ನೀಡುವುದಾಗಿ ಹೇಳಿದ್ದರು. ಟಾಟಾ ಕಂಪನಿಯ ಆಡಳಿತ ನಿರ್ದೇಶಕ ರವಿಕಾಂತ್ ಅವರಿಗೆ ಎಲ್ಲ ವಿಷಯವನ್ನು ಮನವರಿಕೆ ಮಾಡಿಕೊಡಲಾಗಿತ್ತು. ಅವರಿಂದ ಕೂಡಾ ಸಕರಾತ್ಮಕ ಉತ್ತರವೇ ಬಂದಿತ್ತು.
ಈಗಾಗಲೇ ಟಾಟಾ ಕಂಪನಿಯ ಧಾರವಾಡದಲ್ಲಿ ಮಾರ್ಕೋಪೋಲೊ ಬಸ್ಸಿನ ತಯಾರಿಕಾ ಘಟಕದ ಜತೆಗೆ ನ್ಯಾನೋ ಘಟಕವನ್ನು ಸ್ಥಾಪಿಸಬಹುದು ಎಂದು ಸರ್ಕಾರದ ಅನಿಸಿಕೆಯಾಗಿತ್ತು. ಹಾಗೆಯೇ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಟಾಟಾ ಕಂಪನಿ ಮುಖ್ಯಸ್ಥ ರತನ್ ಟಾಟಾ ಅವರಿಗೆ ಪತ್ರ ಬರೆದು ಕರ್ನಾಟಕದಲ್ಲಿ ನ್ಯಾನೋ ಕಾರು ಘಟಕ ಸ್ಥಾಪಿಸುವಂತೆ ಮನವಿ ಮಾಡಿಕೊಂಡಿದ್ದರು.
ಬುಧವಾರ ಸಿಂಗೂರಿನಲ್ಲಿರುವ ಘಟಕದಿಂದ ಎಲ್ಲ ಉಪಕರಣಗಳನ್ನು ಸ್ಥಳಾಂತರ ಮಾಡುತ್ತಿರುವ ವಿಷಯ ಗಮನಕ್ಕೆ ಬಂದಿದ್ದರಿಂದ ಕರ್ನಾಟಕದ ಆಸೆ ಮತ್ತಷ್ಟು ಗರಿಗೆದರಿತ್ತು. ಟಾಟಾ ಸಂಸ್ಥೆಯ ಆಡಳಿತ ನಿರ್ದೇಶಕ ರವಿಕಾಂತ್ ಜತೆಗಿನ ಸಕರಾತ್ಮಕ ಚರ್ಚೆ ಉತ್ತಮ ಕೆಲಸ ಮಾಡಬಹುದು ಎಂದು ಎಣಿಸಲಾಗಿತ್ತು. ಆದರೆ ಟಾಟಾ ಕಂಪನಿ ಗುಜರಾತಿನಲ್ಲಿ ಕಂಪನಿ ಸ್ಥಾಪಿಸಲು ಮುಂದಾಗಿರುವುದರಿಂದ ಕರ್ನಾಟಕದ, ಧಾರವಾಡ ಮಂದಿಯ ಕೈಗಾರಿಕೆ, ಉದ್ಯೋಗ ಅಭಿವೃದ್ಧಿ ಆಸೆ ಕಮರಿದಂತಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಸಿಂಗೂರಿನಿಂದ ಟಾಟಾ ಕಂಪನಿ ಎತ್ತಂಗಡಿ ?