ತಮಿಳುನಾಡಿನ ದೇವಾಲಯ ಸ್ಫೋಟಿಸಲು ಉಗ್ರರ ಸಂಚು
ಚೆನ್ನೈ, ಸೆ. 25 : ಬೆಂಗಳೂರು, ಅಹಮದಾಬಾದ್ ಹಾಗೂ ದೆಹಲಿ ನಗರದಲ್ಲಿ 'ಬ್ಯಾಡ್' ಕಾರ್ಯಚರಣೆ ಮೂಲಕ ಸ್ಫೋಟಗೊಳಿಸಿ ಅಟ್ಟಹಾಸ ಮೆರೆದಿರುವ ಬೆನ್ನಲ್ಲೇ ದೇವಾಲಯಗಳ ತವರೂರು ಎಂದೇ ಖ್ಯಾತಿಯಾಗಿರುವ ತಮಿಳುನಾಡಿನ ಮೇಲೆ ಉಗ್ರರ ಕಣ್ಣು ಬಿದ್ದಿದೆ. ಇಲ್ಲಿನ ಪ್ರಸಿದ್ಧ ದೇವಾಲಯಗಳನ್ನು ಸ್ಫೋಟಿಸುವುದಾಗಿ ಉಗ್ರರು ಬೆದರಿಕೆ ಒಡ್ಡಿದ್ದಾರೆ ಎಂದು ಗುಪ್ತಚರ ಇಲಾಖೆ ತಮಿಳನಾಡು ಸರ್ಕಾರಕ್ಕೆ ತಿಳಿಸಿದೆ.
ಗುಪ್ತಚರ ಇಲಾಖೆಯ ಎಚ್ಚರಿಕೆ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ತುರ್ತುಸಭೆ ಕರೆದು ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿರುವ ಎಲ್ಲ ದೇವಸ್ಥಾನಗಳಿಗೆ ಬಿಗಿ ಬಂದೋಬಸ್ತ್ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ದೇವಾಲಯ ಹಾಗೂ ಐತಿಹಾಸಿಕ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಮೇಲೆ ನಿಗಾ ಇರಿಸಿ ಹಾಗೂ ಸಂಶಯ ಕಂಡು ಬಂದಲ್ಲಿ ಅಂತಹ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಎಂದು ಪೊಲೀಸರಿಗೆ ಆದೇಶ ನೀಡಿದ್ದಾರೆ.
ಲಷ್ಕರ್-ಇ-ತೊಯಿಬಾ ಉಗ್ರ ಸಂಘಟನೆ ರಾಜ್ಯ ಗುಪ್ತದಳಕ್ಕೆ ಫೋನ್ ಮೂಲಕ ಬೆದರಿಕೆ ಒಡ್ಡಿದ್ದು, ದೇವಾಲಯಗಳನ್ನು ಸ್ಫೋಟಗೊಳಿಸುವುದಾಗಿ ಹೇಳಿದೆ. ಕಂಚಿ ಕಾಮಕೋಟಿ ದೇವಾಲಯ, ಮಧುರೈ ಮೀನಾಕ್ಷಿ ದೇವಾಲಯ, ತಿರುವಣ್ಣಾಮಲೈ ಅರುಣಾಚಲೇಶ್ವರ, ಶ್ರೀರಂಗಂ, ಚಿದಂಬರಂ ಸೇರಿ ರಾಜ್ಯ ಎಲ್ಲ ದೇವಾಲಯಗಳಿಗೂ ಈಗಾಗಲೇ ಭಾರಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ ದಿನ-ಮಲಾರ್ ತಮಿಳು ದಿನ ಪತ್ರಿಕೆಯ ಮೇಲೆಯೂ ದಾಳಿ ನಡೆಸುವುದಾಗಿ ಉಗ್ರರು ಬೆದರಿಕೆಯೊಡ್ಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ತಮಿಳು ದಿನಪತ್ರಿಕೆ ದಿನ-ಮಲಾರ್ ನಲ್ಲಿ ಪ್ರವಾದಿ ಮಹಮದ್ ಪೈಗಂಬರ್ ಅವರ ಚಿತ್ರವನ್ನು ಅವಹೇಳನಕಾರಿಯಾದ ಕಾರ್ಟೂನ್ ರೀತಿಯಲ್ಲಿ ಪ್ರಕಟಿಸಿದ್ದಕ್ಕೆ ಉಗ್ರರು ದಾಳಿ ನಡೆಸುವುದಾಗಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ದಿಲ್ಲಿ ಸ್ಫೋಟ : ಮಣಿಪಾಲ್ ನಲ್ಲಿ 3 ಜನ ಸೆರೆ
ಉಗ್ರರ ಮುಂದಿನ ಗುರಿ ಚೆನ್ನೈ, ಕೊಲ್ಕತ್ತಾ?
ತಮಿಳುನಾಡಿನಲ್ಲಿ ಶಂಕಿತ ಉಗ್ರನ ಬಂಧನ












Click it and Unblock the Notifications