ಮಂಗಳೂರು ಮಲ್ಲಿಗೆಯ ಕೋಮು ಸಾಮರಸ್ಯ!
ಮಂಗಳೂರು, ಸೆ.25: ಮಲ್ಲಿಗೆ ಎಂದರೆ ನಮಗೆ ಥಟ್ಟನೆ ನೆನಪಾಗುವುದು ಕೆ.ಎಸ್.ನರಸಿಂಹ ಸ್ವಾಮಿ ಹಾಗೂ ಮೈಸೂರು ಮಲ್ಲಿಗೆ. ಪ್ರೇಮಿಗಳ ಅನುರಾಗದಲ್ಲಿ, ದಂಪತಿಗಳ ಮಿಲನದಲ್ಲಿ ಮೈಸೂರು ಮಲ್ಲಿಗೆಯ ಪಾತ್ರ ಅಮೋಘ. ಆದರೆ ಮಂಗಳೂರು ಸುತ್ತಮುತ್ತ ಬೆಳೆಯುವ ''ಶಂಕರಪುರ'' ಅಥವಾ ''ಮಂಗಳೂರು''ಮಲ್ಲಿಗೆ ಒಂದು ರೀತಿ ಜಾತ್ಯಾತೀತ! ಹಿಂದು ಮತ್ತು ಕ್ರೈಸ್ತರಲ್ಲಿ ಕೋಮು ಸಾಮರಸ್ಯ ತುಂಬುವಲ್ಲಿ ತನ್ನದೇ ಪಾತ್ರವನ್ನು ನಿರ್ವಹಿಸುತ್ತಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ಹಿಂದೂ ಧರ್ಮೀಯರಿಂದ ಮಂಗಳೂರು ಮಲ್ಲಿಗೆಗೆ ಬಹಳಷ್ಟು ಬೇಡಿಕೆ ಇದೆ.ಆಶ್ಚರ್ಯ ಎಂದರೆ ಇಲ್ಲಿನ ಬಹಳಷ್ಟು ಮಲ್ಲಿಗೆ ಬೆಳೆಗಾರರು ಕ್ರಿಶ್ಚಿಯನ್ನರು. ಅವರು ಬೆಳೆದ ಈ ಮಲ್ಲಿಗೆ ದೇವಸ್ಥಾನಗಳಗೆ, ಮದುವೆ, ಮುಂಜಿ ಸೇರಿದಂತೆ ಹಿಂದೂಗಳ ಅನೇಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಳಕೆಯಾಗುತ್ತವೆ. ಕಂಪಿನಲ್ಲಿ ಶಂಕರಪುರ ಮಲ್ಲಿಗೆಗಿಂತ ಮಂಗಳೂರು ಮಲ್ಲಿಗೆ ಒಂದು ಕೈ ಮೇಲು. ಹಾಗಾಗಿ ಮಂಗಳೂರು ಮಲ್ಲಿಗೆಗೆ ಬೇಡಿಕೆ ಅಧಿಕ.
''ಹಲವಾರು ವರ್ಷಗಳಿಂದ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಮಲ್ಲಿಗೆಯನ್ನು ಪ್ರಸಾದವಾಗಿ ವಿತರಿಸಲಾಗುತ್ತಿದೆ. ಹಿಂದು, ಕ್ರಿಶ್ಚಿಯನ್ನರು ಸಾಮರಸ್ಯದಿಂದ ಬದುಕಿ ಎಂಬ ಸಂದೇಶವನ್ನು ಮಂಗಳೂರು ಮಲ್ಲಿಗೆ ತಲತಲಾಂತರದಿಂದ ಬಿತ್ತರಿಸುತ್ತಲೇ ಇದೆ'' ಎನ್ನುತ್ತಾರೆ ಇಲ್ಲಿನ ದೇವಾಲಯದ ಅರ್ಚಕರು.
2003ರಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕ್ರಿಶ್ಚಿಯನ್ ಚರ್ಚ್ ಗಳು ಪ್ರಕಟಿಸಿದ ''ಏಕತಾ'' ಎಂಬ ಪುಸ್ತಕದಲ್ಲಿ ಮಂಗಳೂರು ಮಲ್ಲಿಗೆಯನ್ನು ಪ್ರಸ್ತಾಪಿಸಲಾಗಿದೆ. ''ಮಂಗಳೂರು ಮತ್ತು ಸುತ್ತಮುತ್ತಲಿನ ಕೃಷಿಕರು ತೋಟಗಾರಿಕೆಯಲ್ಲಿ ಬಹಳಷ್ಟು ಯಶಸ್ವಿಯಾಗಿದ್ದಾರೆ. ಇಲ್ಲಿ ಮಲ್ಲಿಗೆ ಹಾಗೂ ಇತರೆ ಸುಗಂಧ ಪುಷ್ಪಗಳನು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಅವು ಹಿಂದೂಗಳ ಬಹಳಷ್ಟು ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿವೆ'' ಎಂದು ಪುಸ್ತಕದಲ್ಲಿ ದಾಖಲಿಸಲಾಗಿದೆ.
ಜಾತ್ಯಾತೀತ ಮಲ್ಲಿಗೆ
ಕ್ರಿಶ್ಚಿಯನ್ನರು ಬೆಳೆದ ಈ ಮಲ್ಲಿಗೆ ಮಂಗಳೂರು ಮಾರುಕಟ್ಟೆಗೆ ಪ್ರವೇಶಿಸಿ ಅಲ್ಲೂ ತನ್ನ ಕೋಮು ಸಾಮರಸ್ಯವನ್ನು ಮುಂದುವರೆಸುತ್ತದೆ. ಮಂಗಳೂರು ಮಾರುಕಟ್ಟೆಯಲ್ಲಿ ಹಿಂದು, ಕ್ರಿಶ್ಚಿಯನ್ ಹಾಗೂ ಮುಸ್ಲಿಂ ವ್ಯಾಪಾರಿಗಳು ಇದ್ದಾರೆ. ಕೈತುಂಬಾ ಆದಾಯ ತರುತ್ತಿರುವ ಮಂಗಳೂರು ಮಲ್ಲಿಗೆ ಜಾತಿ, ಧರ್ಮಗಳನ್ನು ಮೀರಿ ಬೆಳೆದಿದೆ. ಕ್ರಿಶ್ಚಿಯನ್ನರು ಬೆಳೆದ ಮಲ್ಲಿಗೆ ದಿನವೂ ಮಾರುಕಟ್ಟೆಗೆ ಬರುತ್ತದೆ. ಅದರಿಂದಲೇ ನಮ್ಮ ಜೀವನ ಹೂವಿನ ಹಾಸಿಗೆ ಆಗಿದೆ ಎನ್ನುತ್ತಾರೆ ಮಂಗಳೂರು ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಹಮೀದ್ ಖಂಡಕ್.
ಮಂಗಳೂರಿನಲ್ಲಿ ಕೇವಲ ಮೂರು ಮಂದಿ ಮಾತ್ರ ಮಲ್ಲಿಗೆ ಸಗಟು ಮಾರಾಟಗಾರರಿದ್ದಾರೆ. ಅವರಲ್ಲಿ ಒಬ್ಬ ಹಿಂದು ಉಳಿದಿಬ್ಬರು ಮುಸ್ಲಿಮರು. ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ಹಿಂದೂ ವ್ಯಾಪಾರಿಗಳು ಈ ಸಗಟು ಮಾರಾಟಗಾರರಿಂದ ಹೂವನ್ನು ಖರೀದಿಸಿ ದೇವಸ್ಥಾನಗಳಿಗೆ ಸರಬರಾಜು ಮಾಡುತ್ತಾರೆ. ಇತರೆ ಚಿಲ್ಲರೆ ಮಾರಾಟಗಾರರು ಈ ಸಗಟು ಮಾರಾಟಗಾರರಿಂದ ಮಲ್ಲಿಗೆ ಖರೀದಿಸುತ್ತಾರೆ. ಒಟ್ಟಿನಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರೆನ್ನದೆ ಎಲ್ಲರನ್ನು ಒಗ್ಗೂಡಿಸುವ ಕಾರ್ಯದಲ್ಲಿ ಮಂಗಳೂರು ಮಲ್ಲಿಗೆ ನಿರತವಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಮಲ್ಲಿಗೆಯನ್ನು ಬರಿಯ ಹೂ ಎಂದವರಾರು?
ಮೈಸೂರು ಮಲ್ಲಿಗೆ ಪರಿಮಳ ಉಳಿಸಲು ಪೇಟೆಂಟ್ ಅಸ್ತ್ರ












Click it and Unblock the Notifications