ಸಿಂಗೂರಿನಿಂದ ಟಾಟಾ ಕಂಪನಿ ಎತ್ತಂಗಡಿ ?
ಕೋಲ್ಕತ್ತಾ, ಸೆ. 24 : ಕೊನೆಗೂ ಟಾಟಾ ಮೋಟಾರ್ಸ್ ಕಂಪನಿಯು ಸಿಂಗೂರಿನಲ್ಲಿರುವ ನ್ಯಾನೋ ಕಾರು ಉತ್ಪದನಾ ಘಟಕವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಕಂಪನಿಯ ಇಬ್ಬರು ಕಾವಲುಗಾರರನ್ನು ಥಳಿಸಿರುವುದು ರತನ್ ಟಾಟಾ ಅವರ ಅಸಮಾಧಾನಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಕಂಪನಿಯ ಸಲಕರಣೆಗಳನ್ನು ಸ್ಥಳಾಂತರ ಮಾಡುತ್ತಿರುವ ದೃಶ್ಯ ಇಂದು ಕಂಡುಬಂದಿದೆ.
ಸಿಂಗೂರು ನ್ಯಾನೋ ಕಾರು ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಅದರ ಲಾಭ ಪಡೆಯಲು ಮುಂದಾಗಿದೆ. ಕರ್ನಾಟದ ಧಾರವಾಡದಲ್ಲಿ ಕಂಪನಿ ಸ್ಥಾಪಿಸುವುದಾದರೆ ಎನ್ನ ರೀತಿ ಸೌಲಭ್ಯವನ್ನು ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. 1000 ಎಕರೆ ಭೂಮಿಯನ್ನು ನೀಡಲು ನಾವು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಟಾಟಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರವಿಕಾಂತ್ ಜತೆಗೆ ಮಾತುಕತೆಯೂ ನಡೆದಿದೆ. ಹಾಗೆಯೇ ಹರ್ಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳು ಟಾಟಾ ಕಂಪನಿಯನ್ನು ಸೆಳೆಯಲು ಭಾರಿ ಸಾಹಸ ನಡೆಸಿವೆ.
ಘಟನೆ ಹಿನ್ನೆಲೆ
ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲಿ " ಪ್ರತಿಭಟನೆಯ ಭಯದಲ್ಲಿ ಕಂಪನಿ ನಡೆಸಲು ಸಾಧ್ಯವಿಲ್ಲ. ಪ್ರತಿಭಟನೆ ಹೀಗೆ ಮುಂದುವರೆದರೆ ಸಿಂಗೂರಿನ ಉತ್ಪದನಾ ಘಟಕವನ್ನು ಸ್ಥಗಿತಗೊಳಿಸಲಾಗುವುದು "ಎಂದು ಟಾಟಾ ಎಚ್ಚರಿಕೆ ನೀಡಿದ್ದರು.
ಟಾಟಾ ಅವರ ಎಚ್ಚರಿಕೆಯ ನಂತರ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ, ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಸೇರಿ ಎಲ್ಲರೂ ಮಮತಾ ಬ್ಯಾನರ್ಜಿ ಅವರ ಮನವೊಲಿಸಲು ಯತ್ನಿಸಿದರು. ರೈತರ ಭೂಮಿಯನ್ನು ವಾಪಸ್ಸು ನೀಡಿದರೆ ಮಾತ್ರ ರತನ್ ಟಾಟಾ ಜತೆಗೆ ರಾಜಿಗೆ ಸಿದ್ಧ. ಎಂದು ಹೇಳಿದ ಮಮತಾ, ಟಾಟಾ ಕಂಪನಿಯ ಒಡೆತನದಲ್ಲಿರುವ ಹೆಚ್ಚುವರಿ ಭೂಮಿಯನ್ನು ರೈತರಿಗೆ ನೀಡಿದರೆ ಪ್ರತಿಭಟನೆ ಕೈಬಿಡುವುದಾಗಿ ಹೇಳಿದ್ದರು.
ಆದರೆ ಅದಕ್ಕೆ ಒಪ್ಪದ ರತನ್ ಟಾಟಾ ಭೂಮಿ ಮರಳಿಸುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿಕೆ ನೀಡಿದ್ದರು. ಇದರಿಂದ ವಿವಾದ ಮತ್ತಷ್ಟು ಕಗ್ಗಂಟಾಯಿತು. ಸುಮಾರು ಎರಡು ತಿಂಗಳಿನಿಂದ ಈಚೆಗೆ ಪ್ರತಿಭಟನೆ ಹೆಚ್ಚಾಗಿದ್ದರಿಂದ ಕಂಪನಿಯ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ಸೋಮವಾರ ಕಂಪನಿಯ ಇಬ್ಬರು ಕಾವಲುಗಾರರನ್ನು ಥಳಿಸಿರುವುದು ರತನ್ ಟಾಟಾ ಅವರಿಗೆ ತೀವ್ರ ಬೇಸರ ತರಿಸಿದೆ. ಇದರಿಂದ ಕಂಪನಿಯ ಬಾಗಿಲು ಮುಚ್ಚಲು ರತನ್ ಟಾಟಾ ನಿರ್ಧರಿಸಿ ಇಂದು ಅಲ್ಲಿಯ ಉಪಕರಣಗಳನ್ನು ಸ್ಥಳಾಂತರ ಮಾಡುವಂತೆ ಕಂಪನಿಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ನ್ಯಾನೋ ಘಟಕಕ್ಕೆ ರತ್ನಗಂಬಳಿಯ ಆಹ್ವಾನ
ಆಟೋರಿಕ್ಷಾಗಳಿಗೆ ಬದಲು ನ್ಯಾನೋ ಕಾರುಗಳು!
ಇತ್ಯರ್ಥಗೊಂಡ ಸಿಂಗೂರ್ ಭೂವಿವಾದ












Click it and Unblock the Notifications