ಎರಡು ದಿನಗಳ ಕಾಲ ಬ್ಯಾಂಕ್ ಚಟುವಟಿಕೆಗಳು ಸ್ಥಗಿತ
ನವದೆಹಲಿ, ಸೆ.24:ವಿಳಂಬವಾಗುತ್ತಿರುವ ಬ್ಯಾಂಕ್ ನೌಕರರ ವೇತನ ಪರಿಷ್ಕರಣೆ, ಬ್ಯಾಂಕ್ ಗಳ ವಿಲೀನ, ಖಾಸಗಿಕರಣಕ್ಕೆ ವಿರೋಧ ವ್ಯಕ್ತಪಡಿಸಿ ಸಾರ್ವಜನಿಕ ಕ್ಷೇತ್ರದ ಸುಮಾರು 9 ಲಕ್ಷ ಬ್ಯಾಂಕ್ ನೌಕರರು ಸೆ.24 ಹಾಗೂ ಸೆ.25ರಂದು ದೇಶಾದ್ಯಂತ ಮುಷ್ಕರ ಹೂಡಿದ್ದಾರೆ. ಹಾಗಾಗಿ ಬುಧವಾರ ಹಾಗೂ ಗುರುವಾರ ಎರಡು ದಿನಗಳ ಕಾಲ ಬ್ಯಾಂಕಿಂಗ್ ಚಟುವಟಿಕೆಗಳು ಸ್ಥಗಿತವಾಗಲಿವೆ. ಆದರೆ ಖಾಸಗಿ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
''ಮುಖ್ಯ ಕಾರ್ಮಿಕ ಆಯುಕ್ತರೊಂದಿಗಿನ ಮಾತುಕತೆ ವಿಫಲಾವಾಗಿರುವ ಕಾರಣ ನಾವು ಮುಷ್ಕರ ಹೂಡಲು ನಿರ್ಧರಿಸಿದ್ದೇವೆ'' ಎಂದು ಬ್ಯಾಂಕ್ ಸಂಘಟನೆಗಳ ಸಂಯುಕ್ತ ಒಕ್ಕೂಟದ ಸಂಚಾಲಕ ವಿ.ಕೆ.ಗುಪ್ತ ತಿಳಿಸಿದ್ದಾರೆ. ಬ್ಯಾಂಕ್ ನೌಕರರ ಸಂಘ ಹಾಗೂ ಬ್ಯಾಂಕ್ ಅಧಿಕಾರಿಗಳ ಸಂಘ ಜಂಟಿಯಾಗಿ ಹಮ್ಮಿಕೊಂಡಿರುವ 'ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ಉಳಿಸಿ' ಆಂದೋಲನದ ಅಂಗವಾಗಿ ಈ ಮುಷ್ಕರ ನಡೆಯುತ್ತಿದೆ.
ದೇಶದಲ್ಲಿ ಒಟ್ಟು 26 ಸಾರ್ವಜನಿಕ ಬ್ಯಾಂಕುಗಳು 60,000 ಶಾಖೆಗಳ ಮೂಲಕ ಬ್ಯಾಂಕಿಂಗ್ ಕಾರ್ಯಕಲಾಪಗಳನ್ನು ನಡೆಸುತ್ತಿವೆ. ಕಳೆದ ತಿಂಗಳು ಭಾರತೀಯ ಸ್ಟೇಟ್ ಬ್ಯಾಂಕಿನೊಂದಿಗೆ ಸೌರಾಷ್ಟ್ರ ಸ್ಟೇಟ್ ಬ್ಯಾಂಕ್(ಎಸ್ ಬಿಎಸ್) ವಿಲೀನವನ್ನು ವಿರೋಧಿಸಿ ಎಸ್ ಬಿಐ ಅಧಿಕಾರಿಗಳು ಮುಷ್ಕರ ನಡೆಸಿದ್ದರು. ಆದಾದ ಎರಡು ದಿನಗಳ ನಂತರ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಒಂದು ವಿಭಾಗದ ಬ್ಯಾಂಕ್ ನೌಕರರು ಮುಷ್ಕರ ಹೂಡಿದರು. ಈ ಎಲ್ಲ ವಿರೋಧಗಳ ನಡುವೆಯೇ ಎಸ್ ಬಿಐನೊಂದಿಗೆ ಎಸ್ ಬಿಎಸ್ ವಿಲೀನವಾಯಿತು.
ಪ್ರಮುಖ ಬೇಡಿಕೆಗಳು: ಬ್ಯಾಂಕ್ ಗಳ ಖಾಸಗಿಕರಣ ನಿಲ್ಲಿಸಿ. ರಘುರಾಮ್ ರಾಜನ್ ಸಮಿತಿ ಹಾಗೂ ಅನ್ವರುಲ್ ಹುಡಾ ಸಮಿತಿ ವರದಿಗಳನ್ನು ತಿರಸ್ಕರಿಸಿ. ವಿದೇಶಿ ಬಂಡವಾಳ ಆಹ್ವಾನ ನಿಲ್ಲಿಸಿ. ಷೇರು ಮಾರುಕಟ್ಟೆಗೆ ಸಾಲ ನೀಡಿಕೆ ನಿಲ್ಲಿಸಿ. ಇವು ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳು.
(ಏಜೆನ್ಸೀಸ್)