ಚರ್ಚ್ ಮೇಲೆ ದಾಳಿ: ಮಂಗಳೂರಿಗೆ ಸಿಎಂ ಭೇಟಿ
ಬೆಂಗಳೂರು, ಸೆ. 15 : ರಾಜ್ಯ ಸರ್ಕಾರದ ವಿರುದ್ಧ ಕೆಲವರು ಪಿತೂರಿ ನಡೆಸಿದ್ದಾರೆ. ಹಿಂದು ಪರ ಸಂಘಟನೆಗಳು ಹೆಸರಿನಲ್ಲಿ ಸರ್ಕಾರಕ್ಕೆ ಮಸಿ ಬಳಿಯುವ ಕಾರ್ಯದಲ್ಲಿ ಕೆಲ ದುಷ್ಟಶಕ್ತಿಗಳು ಷಡ್ಯಂತ್ರ ರೂಪಿಸಿ ಸಮಾಜದ ಸಾಮರಸ್ಯ ಕದಡತೊಡಗಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದರು.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಮಂಗಳೂರು, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಚರ್ಚ್ ಮೇಲಿನ ದಾಳಿಯನ್ನು ಗಮನಿಸಿದರೆ ಇದೊಂದು ವ್ಯವಸ್ಥಿತವಾದ ಪಿತೂರಿ ಎಂದು ಕಂಡುಬರುತ್ತದೆ. ಇಂದು ಮಂಗಳೂರಿಗೆ ತೆರಳುವುದಾಗಿ ಹೇಳಿದ ಯಡಿಯೂರಪ್ಪ, ಯಾರೇ ತಪ್ಪು ಮಾಡಿದ್ದರೂ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ರಾಜಕೀಯ ನಿವೃತ್ತಿ?
'ಶತ ದಿನ'ದ ಸಮಾರಂಭದಲ್ಲಿ ನೀಡಿರುವ ಆಶ್ವಾಸನೆಗಳು ಸೇರಿ ಬಿಜೆಪಿ ಪ್ರಣಾಳಿಕೆಯಲ್ಲಿನ ಎಲ್ಲ ಯೋಜನೆಗಳನ್ನು ಸರ್ಕಾರ ಚಾಚು ತಪ್ಪದೆ ಅನುಷ್ಠಾನಗೊಳಿಸಲಿದೆ ಎಂದು ಭರವಸೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಒಂದು ವೇಳೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿಫಲವಾದರೆ, ರಾಜಕೀಯ ಜೀವನದಿಂದ ನಿವೃತ್ತ್ರಿ ತೆಗೆದುಕೊಳ್ಳುವೆ ಎಂದು ಘೋಷಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಆಗಿಲ್ಲ, 100 ದಿನಗಳ ಸಾಧನೆ ಶೂನ್ಯ ಎಂದು ಟೀಕಿಸುತ್ತಿರುವ ವಿರೋಧ ಪಕ್ಷಗಳಿಗೆ ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಆಹ್ವಾನ ನೀಡಿದ ಯಡಿಯೂರಪ್ಪ, ನಾನು ಮುಖ್ಯಮಂತ್ರಿಯಲ್ಲ, ಜನರ ಸೇವೆ ಮಾಡುವ ಸೇವಕ ಎಂದರು.
ಕೇಂದ್ರ ಸರ್ಕಾರದ ಮೃದುಧೋರಣೆಯಿಂದಲೇ ಉಗ್ರರು ಇಂದು ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವುದಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ ಯಡಿಯೂರಪ್ಪ, ಮತಗಳಿಕೆಯ ನೆಪದಲ್ಲಿ ಪೋಟೋ ಕಾಯ್ದೆಯನ್ನು ರದ್ದುಪಡಿಸಿರುವುದಕ್ಕೆ ಭಯೋತ್ಪಾದನೆಗೆ ಸಹಕಾರಿಯಾಗಿದೆ ಹರಿಹಾಯ್ದರು. ಒಂದು ಜನಾಂಗದ ಒಲೈಕೆಗಾಗಿ ಕೇಂದ್ರ ಸರ್ಕಾರ ಮಾಡುತ್ತಿರುವ ಅನುಕೂಲ ಸಿಂಧು ರಾಜಕಾರಣದಿಂದ ಇಂದು ದೇಶದ ಆಂತರಿಕ ಭದ್ರತೆಗೆ ಭಾರಿ ಹೊಡೆತ ಬಿದ್ದಿದೆ. ಉಗ್ರರು ವಿನಾಕಾರಣ ಅಮಾಯಕ ಜನರನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಇದನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದರು ಟೀಕಿಸಿದರು.
(ದಟ್ಸ್ ಕನ್ನಡ ವಾರ್ತೆ)
ಮತಾಂತರ
:
ಮಂಗಳೂರು
ಉದ್ವಿಗ್ನ,
ನಿಷೇಧಾಜ್ಞೆ
ಜಾರಿ
ಮಂಗಳೂರು:
ಭಜರಂಗದಳದಿಂದ
ಚರ್ಚ್
ಮೇಲೆ
ದಾಳಿ