ಗೃಹಸಚಿವ ಶಿವರಾಜ್ ಪಾಟೀಲ್ ತಲೆದಂಡ ?
ನವದೆಹಲಿ, ಸೆ. 15 : ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯ ತಡೆಯವಲ್ಲಿ ಗೃಹ ಇಲಾಖೆ ಅಸಮರ್ಥವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ತಲೆದಂಡಕ್ಕೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆ ನಡೆದಿದ್ದು, ಶಿವರಾಜ್ ಪಾಟೀಲ್ ಅವರಿಗೆ ಆಹ್ವಾನ ನೀಡದಿರುವುದು ಈ ಉಹಾಪೋಹಕ್ಕೆ ಕಾರಣವಾಗಿದೆ.
ಕಳೆದ ಅನೇಕ ದಿನಗಳಿಂದ ದೇಶದಲ್ಲಿ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾರೆ. ಹೈದರಾಬಾದ್, ಜೈಪುರ, ಬೆಂಗಳೂರು, ಅಹಮದಾಬಾದ್ ಹಾಗೂ ಕಳೆದ ಶನಿವಾರ ರಾಜಧಾನಿ ದಿಲ್ಲಿಯಲ್ಲಿ ಸರಣಿ ಸ್ಫೋಟಗಳು ನಡೆದಿವೆ. ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಲೆಕ್ಕವಿಲ್ಲದಷ್ಟು ಮಂದಿ ಗಾಯಗೊಂಡಿದ್ದಾರೆ. ದೇಶದಾದ್ಯಂತ ಉಗ್ರರ ಜಾಲ ಅವ್ಯಾಹತವಾಗಿ ಬೆಳೆದಿದ್ದರೂ ಅದನ್ನು ಸಮರ್ಥವಾಗಿ ನಿಭಾಯಿಯಿಸಲು ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ವಿಫಲರಾಗಿದ್ದಾರೆ.
ಸಚಿವರ ನಿರ್ಲಕ್ಷ್ಯ ಹಾಗೂ ಇಲಾಖೆ ಅಸಮರ್ಥತೆಯಿಂದ ತಲೆ ತಗ್ಗಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಪ್ರತಿಪಕ್ಷಗಳು ಇದೇ ವಿಷಯವನ್ನು ಅಸ್ತ್ರವನ್ನಾಗಿಸಿಕೊಂಡು ಸರ್ಕಾರದ ಮೇಲೆ ಮುಗಿಬೀಳುತ್ತಿವೆ. ಹಾಗೂ ಅಮರನಾಥ್ ಭೂವಿವಾದ ಹಾಗೂ ಒರಿಸ್ಸಾ ಗಲಭೆಯಲ್ಲಿ ಕೂಡಾ ಕೇಂದ್ರದ ಲೋಪ ಎದ್ದು ಕಂಡಿದ್ದರಿಂದ ತೀವ್ರ ಮುಖಭಂಗಕ್ಕೆ ಈಡಾಗಬೇಕಾಯಿತು.
ಈ ಎಲ್ಲ ವಿಷಯವನ್ನು ಅವಲೋಕಿಸಿರುವ ವರಿಷ್ಠರು ಇಂದು ಉನ್ನತ ಮಟ್ಟದ ಸಭೆ ನಡೆಸಿತೊಡಗಿದ್ದಾರೆ. ಖಾತೆ ತ್ಯಜಿಸುವಂತೆ ಶಿವರಾಜ್ ಪಾಟೀಲ್ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ಸಭೆಗೆ ಪಾಟೀಲ್ ಅವರನ್ನು ಉದ್ದೇಶ ಪೂರ್ವಕವಾಗಿ ಆಹ್ವಾನಿಸಿಲ್ಲ. ಕಾಂಗ್ರೆಸ್ ನ ಹಿರಿಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಶಿವರಾಜ್ ಪಾಟೀಲ್ ಅವರ ಕಾರ್ಯಕ್ಷಮತೆ ಸೋನಿಯಾಗಾಂಧಿ ಹಾಗೂ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಲ್ಲಿ ಅಸಮಾಧಾನ ಮೂಡಿಸಿದ್ದರಿಂದ ಪಾಟೀಲ್ ಅವರ ತೆಲೆದಂಡವಾಗಲಿದೆ ಎನ್ನುವ ಸುದ್ದಿ ದಟ್ಟವಾಗಿದೆ.
ಈ ಮಧ್ಯೆ ದಿಲ್ಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಸಿಮಿ ಸಂಘಟನೆಯ ಅಲಂಜೇಬ್, ಆಫ್ರಿದಿ, ರಖೀಬ್, ಮುಜೀಬ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಉತ್ತರ ಪ್ರದೇಶ ಮೂಲದ ವ್ಯಕ್ತಿಗಳು ಸ್ಫೋಟ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)
ದಿಲ್ಲಿ ಸ್ಫೋಟ : ಬಿಜಾಪುರದಲ್ಲಿ ಶಂಕಿತನ ಬಂಧನ
ದಿಲ್ಲಿ ಸ್ಫೋಟ: ನಾಲ್ಕು ಜೀವಂತ ಬಾಂಬ್ ನಿಷ್ಕ್ರಿಯ












Click it and Unblock the Notifications