ಚಿಕ್ಕಬಳ್ಳಾಪುರದಲ್ಲಿಯೂ ಚರ್ಚ್ ಮೇಲೆ ದಾಳಿ
ಚಿಕ್ಕಬಳ್ಳಾಪುರ, ಸೆ. 15 : ರಾಜ್ಯದ ವಿವಿಧಡೆ ಚರ್ಚ್ ಗಳ ಮೇಲೆ ದಾಳಿ ನಡೆಯುತ್ತಿರುವ ಬೆನ್ನಲ್ಲೇ ನಗರದ ಚರ್ಚ್ ವೊಂದರ ಮೇಲೆ ಇಂದು ಬೆಳಗಿನ ದುಷ್ಕರ್ಮಿಗಳ ದಾಳಿ ನಡೆಸಿ ಏಸು ಶಿಲುಬೆ, ಇತರ ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ. ಇಂದು ನಸುಕಿನ ಜಾವ ಎರಡು ಕ್ವಾಲೀಸ್ ಕಾರಿನಲ್ಲಿ ಆಗಮಿಸಿದ ದುಷ್ಕರ್ಮಿಗಳ ತಂಡ ಈ ಕೃತ್ಯ ಎಸಗಿ ಪರಾರಿಯಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಭಜರಂಗದಳದ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮತಾಂತರ ಆರೋಪದ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ನಡೆದಿರುವ ಚರ್ಚ್ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಬೇಕೆಂದು ಶಿವಮೊಗ್ಗದಲ್ಲಿ ಕ್ರೈಸ್ತ ಸಮುದಾಯ ನೂರಾರು ಜನ ತೀವ್ರ ಪ್ರತಿಭಟನೆಗೆ ನಡೆಸಿದರು.
ಭಜರಂಗ ದಳದ ಕಾರ್ಯಕರ್ತರು ವಿನಾಕಾರಣ ಅಮಾಯಕ ಕ್ರೈಸ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ರೋಮನ್ ಕ್ಯಾಥೋಲಿಕ್ ಪಂಗಡದವರು ಮತಾಂತರ ಕಾರ್ಯವನ್ನು ನಡೆಸುವುದಿಲ್ಲ. ಯಾರೂ ಒಬ್ಬಿಬ್ಬರು ಮಾಡುವ ಕೆಲಸಕ್ಕೆ ಇಡೀ ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಆದರೆ ಮಂಗಳೂರಿನಲ್ಲಿ ನ್ಯೂಲೈಫ್ ಪ್ರಾರ್ಥನಾ ಸ್ಥಳದಲ್ಲಿ ಮತಾಂತರ ಮಾಡುವವರನ್ನು ಬಂಧಿಸಿ ಶಿಕ್ಷೆ ಕೊಡಿ, ಆದರೆ ಅಮಾಯಕರ ಮೇಲೆ ದೌರ್ಜನ್ಯ ಮಾಡುವುದು ಬೇಡ ಎಂದು ಅಲವತ್ತುಕೊಂಡಿದ್ದಾರೆ. ಮತಾಂತರಕ್ಕೆ ಪ್ರಚೋದನೆ ನೀಡುವ ಪ್ರಾರ್ಥನಾ ಸ್ಥಳಗಳ ಮೇಲೆ ಮಾತ್ರ ದಾಳಿ ನಡೆಸಲಾಗುವುದು ಎಂದು ಭಜರಂಗದಳ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯಪಾಲ, ಸಿಎಂ ಜೊತೆ ಪಿಎಂ ಚರ್ಚೆ
ರಾಜ್ಯದಲ್ಲಿ ನಡೆದಿರುವ ಚರ್ಚ್ ದಾಳಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ರಾಜ್ಯಪಾಲ ರಾಮೇಶ್ವರ್ ಠಾಕೂರ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರ ಜೊತೆಗೆ ಚರ್ಚ್ ಗಳಿಗೆ ಸೂಕ್ತ ಭದ್ರತೆ ನಿಯೋಜಿಸಬೇಕೆಂದು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಬಲವಂತ ಮತಾಂತರ ವಿರುದ್ಧ ಈಶ್ವರಪ್ಪ ಎಚ್ಚರಿಕೆ
ಮಂಗಳೂರು :ಭಜರಂಗದಳ ಕಾರ್ಯಕರ್ತರ ಬಂಧನ
ಮತಾಂತರ ಪ್ರಕರಣ: ಉಡುಪಿ ಪೊಲೀಸ್ ವರದಿ












Click it and Unblock the Notifications