ಅಂಚೆ ಕಚೇರಿಯಲ್ಲಿ ಟಿಕೆಟ್ ಬುಕಿಂಗ್ ಗೆ ಚಾಲನೆ
ಬೆಂಗಳೂರು, ಸೆ.15: ಅಂಚೆ ಕಚೇರಿಗಳ ಮೂಲಕ ನೀವೀಗ ಬಸ್ಸು, ವಿಮಾನ, ರೈಲ್ವೆ ಟಿಕೆಟ್ ಗಳನ್ನು ಮುಂಗಡ ಕಾದಿರಿಸಬಹುದು. ಎಆರ್ ಎಂ ಐ ಸಲ್ಯೂಷನ್ಸ್ ಪ್ರೈ ಲಿಮಿಟೆಡ್ ಹಾಗೂ ಭಾರತೀಯ ಅಂಚೆ ಇಲಾಖೆಗಳು ಜಂಟಿಯಾಗಿ ಈ ಸೇವೆಯನ್ನು ಕರ್ನಾಟಕದಲ್ಲಿ ಆರಂಭಿಸಿವೆ.
ಮೇ 2008ರಂದು ತಮಿಳುನಾಡಿನಲ್ಲಿ ಆರಂಭಿಸಿದ ಈ ಯೋಜನೆಗೆ ಅಭೂತಪೂರ್ವ ಯಶಸ್ಸು ದೊರಕಿದ ಬಳಿಕ ಪ್ರಸ್ತುತ ಕರ್ನಾಟಕದ 150 ಅಂಚೆ ಕಚೇರಿಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಯಿತು. ಮುಂಬರುವ ಐದು ವರ್ಷಗಳಲ್ಲಿ ದೇಶದ ಆಂತರಿಕ ಪ್ರಯಾಣ ಶೇ.20ರಷ್ಟು ವೃದ್ಧಿಯಾಗಲಿದೆ. ಹಾಗೆಯೇ ಅಂಚೆ ಕಚೇರಿಗಳು ಸಹ ಸೇವಾ ವಲಯಕ್ಕೆ ಅಡಿಯಿಟ್ಟಿದ್ದು ಗ್ರಾಮೀಣ ಪ್ರಯಾಣಕ್ಕ್ಕೆ ಸಹಕರಿಸುತ್ತಿದೆ. ಒಂದು ಲಕ್ಷಕ್ಕೂ ಅಧಿಕ ಟಿಕೆಟ್ ಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡಲಾಗುತ್ತಿದೆ.
ಇದಕ್ಕಾಗಿ ಯಾವುದೇ ಅಂತರ್ಜಾಲ ತಾಣವನ್ನು ರೂಪಿಸಲಾಗಿಲ್ಲ. ಅಂಚೆ ಕಚೇರಿಗಳ ಮೂಲಕ ಈ ಸೇವೆಯನ್ನು ಒದಗಿಸಲಾಗುತ್ತದೆ ಎಂದು ಎಆರ್ ಎಂ ಐ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ಡಾ.ಹಸ್ಮನ್ ಫರಾಜ್ ತಿಳಿಸಿದರು. ಗ್ರಾಮೀಣ ಪ್ರದೇಶಗಳಿಗೆ ಈ ಸೇವೆ ಹೆಚ್ಚು ಸಿಗುವಂತೆ ಮಾಡುವುದೇ ನಮ್ಮ ಮುಖ್ಯ ಗುರಿ. ಈ ಸೇವೆಯನ್ನು ನೀಡುತ್ತಿರುವ ಅಂಚೆ ಕಚೇರಿಗಳ ಸಂಖ್ಯೆಯನ್ನು ಹಂತಹಂತವಾಗಿ ಹೆಚ್ಚಿಸಲಾಗುತ್ತದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಅವರು, ಆರಂಭದಲ್ಲಿ ತಮಿಳುನಾಡಿನಲ್ಲಿ 27 ಅಂಚೆ ಕಚೇರಿಗಳಲ್ಲಿ ಮುಂಗಡ ಟಿಕೆಟ್ ಕಾದಿರಿಸುವ ಸೇವೆಯನ್ನು ಪ್ರಾರಂಭಿಸಲಾಯಿತು. ಇದಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಈಗ ಈ ಸಂಖ್ಯೆಯನ್ನು ಶೀಘ್ರದಲ್ಲೆ100 ಅಂಚೆ ಕಚೇರಿಗಳಿಗೆ ವಿಸ್ತರಿಸಲಾಗುತ್ತ್ತಿದೆ ಎಂದರು. ಮುಂದಿನ ತಿಂಗಳು ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗುತ್ತದೆ. ಮುಂದಿನ 12 ರಿಂದ 15 ತಿಂಗಳಲ್ಲಿ ದೇಶದ 8000 ಅಂಚೆ ಕಚೇರಿಗಳಲ್ಲಿ ಈ ಸೇವೆ ಲಭ್ಯವಾಗಲಿರುವ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಾಸ್ ಪೋರ್ಟ್ ಅರ್ಜಿ ಕೇಂದ್ರಗಳ ಸಂಖ್ಯೆ ವಿಸ್ತರಣೆ
ಕರ್ನಾಟಕ ಪ್ರಧಾನ ಪೋಸ್ಟ್ ಮಾಸ್ಟರ್ ಜನರಲ್ ಎಂ.ಪಿ.ರಾಜನ್ ಮಾತನಾಡುತ್ತಾ, ಈ ಯೋಜನೆಗೆ ಒಳಪಟ್ಟಿರುವ 150 ಅಂಚೆ ಕಚೇರಿಗಳಲ್ಲಿ 50 ಅಂಚೆಕಚೇರಿಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲೇ ಇವೆ. ಉಳಿದ ಅಂಚೆ ಕಚೇರಿಗಳು ಗ್ರಾಮಾಂತರ ಪ್ರದೇಶದಲ್ಲಿವೆ. ವಿದೇಶಿ ವಿನಿಮಯ ಹಾಗೂ ಪಾಸ್ ಪೋರ್ಟ್ ಅರ್ಜಿ ಕೇಂದ್ರಗಳ ಸಂಖ್ಯೆಯನ್ನು ಕ್ರಮವಾಗಿ 3 ಮತ್ತು 80ಕ್ಕೆ ವಿಸ್ತರಿಸಲಾಗುತ್ತದೆ ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications