ಬಿಹಾರ ಸಂತ್ರಸ್ಥರಿಗೆ ಸಹಾಯಹಸ್ತ ಚಾಚಿದ ಸರ್ಕಾರ
ಬೆಂಗಳೂರು, ಸೆ. 01 : ಕೋಸಿ ನದಿ ಸೃಷ್ಟಿಸಿರುವ ಕಣ್ಣೀರು ಕಥೆ ಮತ್ತಷ್ಟು ಬಿಗಡಾಯಿಸಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಕ್ಕಾಗಿ ಸಂತ್ರಸ್ಥರ ರೋದನ ಮುಗಿಲುಮುಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಿಹಾರ ರಾಜ್ಯಕ್ಕೆ ನೆರವಿನ ಹಸ್ತ ಚಾಚಿದ್ದು, 10 ಕೋಟಿ ರುಪಾಯಿ ನಗದು, ಟೆಂಟ್, ಕಂಬಳಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಪರಿಹಾರ ಕಾರ್ಯಕ್ಕೆ ತಂಡಗಳನ್ನು ಕಳುಹಿಸಿಕೊಡಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಡಾ. ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ನಗರದಲ್ಲಿ ಸಂಪುಟ ಸಹದ್ಯೋಗಿಗಳು ಸೇರಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ಜನತೆ ಅನುಭವಿಸುತ್ತಿರುವ ಯಾತನೆ, ನೋವುಗಳಿಗೆ ತೀವ್ರ ವಿಷಾಧ ವ್ಯಕ್ತಪಡಿಸಿದರು. ರಾಷ್ಟ್ರೀಯ ಪ್ರಕೋಪ ಎದುರಿಸುತ್ತಿರುವ ಬಿಹಾರ ರಾಜ್ಯದ ಸಂತ್ರಸ್ಥರಿಗೆ ರಾಜ್ಯ ಸರ್ಕಾರವೂ ಎಲ್ಲ ರೀತಿಯ ನೆರವಿಗೂ ಸಿದ್ಧ ಎಂದ ಆಚಾರ್ಯ, ನಾಳೆ ಬೆಳಗಿನ ಹೊತ್ತಿಗೆ 10 ಕೋಟಿ ನಗದು, ಬಿಹಾರ ಸರ್ಕಾರದ ಖಜಾನೆ ತಲುಪಲಿದೆ. ಪ್ರವಾಹದಲ್ಲಿ ಸಿಲುಕಿರುವ ಸಂತ್ರಸ್ಥರ ಜನರ ರಕ್ಷಣೆಯ ಸಲುವಾಗಿ ಪರಿಹಾರ ಕಾರ್ಯಕ್ಕೆ ತಂಡಗಳನ್ನು ಕಳುಹಿಸಿಕೊಡಲು ನಿರ್ಧರಿಸಲಾಗಿದೆ. ಅದರ ಜೊತಗೆ ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆ ದೋಣಿಗಳ ಅವಶ್ಯಕತೆ ಇದ್ದು. ರಾಜ್ಯದಿಂದ ಶೀಘ್ರದಲ್ಲಿ ಅವರಗಳನ್ನು ಕಳುಹಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಕಳೆದ ಎರಡು ವಾರದಿಂದ ಸುರಿಯುತ್ತಿರುವ ವರುಣನ ರುದ್ರ ನರ್ತನದಿಂದಾಗಿ ಕೋಸಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ಸುಮಾರು 60 ಹೆಚ್ಚು ಜನರು ಮೃತಪಟ್ಟಿದ್ದಾರೆ. 16 ಕ್ಕೂ ಹೆಚ್ಚು ಜಿಲ್ಲೆಗಳು ನೀರಿನಿಂದ ಜಲಾವೃತವಾಗಿವೆ. ಕೇಂದ್ರ ಸರ್ಕಾರವು ಬಿಹಾರ ದುರಂತವನ್ನು ರಾಷ್ಟ್ರೀಯ ವಿಕೋಪ ಎಂದು ಘೋಷಿಸಿದ್ದು, 1000 ಕೋಟಿ ರುಪಾಯಿಗಳ ಪರಿಹಾರವನನ್ನು ಘೋಷಿಸಿದೆ. ದೇಶಿ ವಿದೇಶಗಳಿಂದ ಬಿಹಾರ ರಾಜ್ಯಕ್ಕೆ ಸಹಾಯಹಸ್ತ ಹರಿದು ಬರತೊಡಗಿದೆ.
(ದಟ್ಸ್ ಕನ್ನಡ ವಾರ್ತೆ)
ಬಿಹಾರ್ ಪ್ರವಾಹ : ಪಿಎಂ, ಸೋನಿಯಾ ವೈಮಾನಿಕ ಸಮೀಕ್ಷೆ












Click it and Unblock the Notifications