ಪ್ರಜಾರಾಜ್ಯಂ ಪಕ್ಷಕ್ಕೆ ಆರಂಭದಲ್ಲೇ ಅಪಶಕುನ
ಹೈದರಾಬಾದ್, ಆ. 29 : ಕಾಂಗ್ರೆಸ್ ಮತ್ತು ಟಿಡಿಪಿಗಳ ಪ್ರಬಲ ಎದುರಾಳಿ ಪಕ್ಷ ಎಂದೇ ಗುರುತಿಸಿಕೊಂಡಿರುವ ತೆಲುಗು ಮೆಗಾಸ್ಟಾರ್ ಚಿರಂಜೀವಿ ಮಂಗಳವಾರ ಸ್ಥಾಪಿಸಿರುವ ಪ್ರಜಾರಾಜ್ಯಂ ಪಕ್ಷಕ್ಕೆ ಆರಂಭದಲ್ಲೇ ಅಪಶಕುನ ಎದುರಾಗಿವೆ. ಪಕ್ಷದ ನೋಂದಣಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಚುನಾವಣಾ ಅಯೋಗವು ಅನೇಕ ಲೋಪದೋಷಗಳನ್ನು ಪತ್ತೆ ಮಾಡಿರುವುದು ಇದಕ್ಕೆ ಕಾರಣವಾಗಿದೆ.
ಅಲ್ಲದೆ ಒಂದು ತಿಂಗಳ ಹಿಂದೆಯೇ ಕಡಪಾ ಜಿಲ್ಲೆಯ ಸಿ. ಕೆ. ರೆಡ್ಡಿ ಎನ್ನುವವರೊಬ್ಬರು ಪ್ರಜಾರಾಜ್ಯಂ ಹೆಸರಿನ ಪಕ್ಷ ನೋಂದಾಯಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿ ಕೋರಿರುವುದು ಚಿರು ಪಕ್ಷಕ್ಕೆ ಇನ್ನೊಂದು ಅಡ್ಡಿಯಾಗಿದೆ. ಹೊಸ ಪಕ್ಷ ನೋಂದಾಯಿಸಬೇಕಾದರೆ ಕನಿಷ್ಠ ನೂರು ಸದಸ್ಯರು ತಮ್ಮ ಮತದಾನದ ಗುರುತಿನ ಚೀಟಿಯ ಪ್ರತಿಯೊಂದಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.
ಆದರೆ ಚಿರಂಜೀವಿ ಅವರು ಅರ್ಜಿ ಸಲ್ಲಿಸುವಾಗ ಕೇವಲ 88 ಸದಸ್ಯರು ಅರ್ಜಿಯನ್ನು ಸಲ್ಲಿಸಿದ್ದು, ಈ ಸದಸ್ಯರು ಮತದಾನದ ಗುರುತಿನ ಚೀಟಿಯ ಪ್ರತಿಯನ್ನು ಲಗತ್ತಿಸಿಲ್ಲ. ಹಾಗೂ ಗೆಜೆಟೆಡ್ ಅಧಿಕಾರಿಯಿಂದ ಸಹಿ ಪಡೆದಿಲ್ಲ. ಚಿರಂಜೀವಿ 8 ಅದೃಷ್ಟ ಸಂಖ್ಯೆ ಎಂದು ನಂಬಿರುವ ಹಿನ್ನೆಲೆಯಲ್ಲಿ 88 ಸದಸ್ಯರ ಅರ್ಜಿಯನ್ನು ಮಾತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಚಿರಂಜೀವಿ ನೂತನ ಪಕ್ಷ 'ಪ್ರಜಾರಾಜ್ಯಂ 'ಆರಂಭ
ಪ್ರಜಾರಾಜ್ಯಂ ನಾಯಕ ಚಿರಂಜೀವಿಗೆ ಟಿವಿ9 ಭೋಪರಾಕ್!












Click it and Unblock the Notifications