ನೇತ್ರದಾನ ಸಂಕಲ್ಪ ತೊಟ್ಟ ಬಿ.ಎಸ್. ಯಡಿಯೂರಪ್ಪ
ಬೆಂಗಳೂರು, ಆ. 27 : ನೇತ್ರದಾನ ಮಹಾದಾನ ಎಂಬ ಮಾತನ್ನು ಆಡಳಿತರೂಢ ಬಿಜೆಪಿ ಸರ್ಕಾರ ಪಾಲಿಸಲು ಮುಂದಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಚಿವ ಸಂಪುಟದ ಎಲ್ಲ ಸದಸ್ಯರು ನೇತ್ರದಾನ ಮಾಡಲು ನಿರ್ಧರಿಸಿದ್ದಾರೆ. ನುಡಿದಂತೆ ನಡೆದು ಇತರರಿಗೆ ಮಾದರಿಯಾಗಲು ಸರ್ಕಾರ ಹೊರಟಿದೆ.
ಬುಧವಾರ ಸಚಿವ ಸಂಪುಟ ಆರಂಭವಾಗುವುದಕ್ಕಿಂತ ಮೊದಲು ಸರ್ಕಾರ ಈ ವಿಷಯವನ್ನು ಪ್ರಕಟಿಸಿದ್ದು, ಯಡಿಯೂರಪ್ಪ ಸೇರಿ ಸಚಿವ ಸಂಪುಟದ ಎಲ್ಲ ಸದಸ್ಯರು ನೇತ್ರದಾನ ಮಾಡಿದ ದಾನಪತ್ರವನ್ನು ನಗರದ ನಾರಾಯಣ ನೇತ್ರಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ಮೂಲಕ ಕಣ್ಣು ಕಳೆದುಕೊಂಡು ಕತ್ತಲೆ ಜೀವನ ನಡೆಸುವವರಿಗೆ ಬೆಳಕು ನೀಡುವ ಮೂಲಕ ದಾರಿ ದೀಪವಾಗುವ ಕೆಲಸಕ್ಕೆ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಮೊಟ್ಟಮೂದಲ ಬಾರಿಗೆ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸಚಿವರು ನೇತ್ರದಾನ ಮಾಡಿದ ಹೆಗ್ಗಳಿಕೆಗೆ ಯಡಿಯೂರಪ್ಪ ಭಾಜನರಾಗಿದ್ದಾರೆ.
ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದು ಇತರರಿಗೆ ಮಾದರಿಯಾಗಲಿದೆ. ಸರ್ಕಾರ ನೇತ್ರ ದಾನಕ್ಕೆ ಮುಂದಾಗಿರುವುದು ಜನರಲ್ಲಿ ಉತ್ಸಾಹ ಮೂಡಿಸಿರುವ ಹಿನ್ನೆಲೆಯಲ್ಲಿ ಒಂದು ವಾರದ ಅವಧಿಯಲ್ಲಿ 20 ಸಾವಿರಕ್ಕೂ ಅಧಿಕ ಜನರು ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದೆ ಬರುವ ಸಾಧ್ಯತೆಗಳಿವೆ ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ. ಭುಜಂಗಶೆಟ್ಟಿ ಹೇಳಿದ್ದಾರೆ.
ನಟಸಾರ್ವಭೌಮ ಡಾ. ರಾಜ್ ಕುಮಾರ್ ಸಹ ತಮ್ಮ ಕಣ್ಣುಗಳನ್ನು ದಾನ ಮಾಡಿ ಇತರರಿಗೆ ಮಾದರಿಯಾಗಿದ್ದರು. ಅವರ ನಿಧನ ನಂತರ ನಾರಾಯಣ ನೇತ್ರಾಲಯಕ್ಕೆ ತಮ್ಮ ಕಣ್ಣುಗಳನ್ನು ದಾನ ಮಾಡಿ ಅಂಧತ್ವದಿಂದ ಬಳಲುತ್ತಿರವವರಿಗೆ ಬೆಳಕು ನೀಡಿ ದಾರಿದೀಪವಾಗಿದ್ದರು. ಇದರಿಂದ ರಾಜ್ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ತಮ್ಮ ಕಣ್ಣಿನ ದಾನಕ್ಕೆ ಮುಂದಾದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications