ಲೋಡ್ ಶೆಡ್ಡಿಂಗ್ ; ರಾಜ್ಯದಲ್ಲಿ ಕತ್ತಲ ಸಾಮ್ರಾಜ್ಯ
ಬೆಂಗಳೂರು, ಆ. 7 : ಜಲಾನಯನ ಪ್ರದೇಶಗಳಲ್ಲಿ ನಿರೀಕ್ಷಿತ ಮಳೆಯಾಗದ ಕಾರಣ ಬೆಂಗಳೂರು ಸೇರಿದಂತೆ ಎಲ್ಲ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತೆ ಅನಧಿಕೃತ ಲೋಡ್ ಶೆಡ್ಡಿಂಗ್ ಮುಂದುವರಿಸಲಾಗುತ್ತಿದೆ. ಛತ್ತೀಸ್ಗಡದಿಂದ 100 ಮೆಗಾವಾಟ್ ವಿದ್ಯುತ್ ಪಡೆಯುವಲ್ಲಿ ಹಿನ್ನಡೆ ಉಂಟಾಗಿದ್ದು ವಿದ್ಯುತ್ ಇಲ್ಲದ ಕರಾಳ ರಾತ್ರಿಗಳನ್ನು ರಾಜ್ಯದ ಜನತೆ ಅನುಭವಿಸಬೇಕಾಗಿದೆ.
ಜುಲೈ ತಿಂಗಳ ಅಂತ್ಯದಿಂದಲೇ ಮಳೆ ಕಡಿಮೆಯಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಸಂಗ್ರಹವಾಗಿಲ್ಲ. ಹಾಗಾಗಿ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆ ನಗರಗಳಲ್ಲಿ ನಿತ್ಯ 6 ಗಂಟೆ ಕಾಲ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರಿಗೆ ನಿತ್ಯ 13 ಗಂಟೆ ಕಾಲ ವಿದ್ಯುತ್ ಕಡಿತಗೊಳಿಸಲಾಗುವುದು. ಪಂಪ್ ಸೆಟ್ ಗಳಿಗೆ ಕೇವಲ 5 ಗಂಟೆ ಕಾಲ ಮೂರು ಫೇಸ್ ಹಾಗೂ 6 ಗಂಟೆ ಕಾಲ ಸಿಂಗಲ್ ಫೇಸ್ ನಲ್ಲಿ ವಿದ್ಯುತ್ ನೀಡಲಾಗುತ್ತಿದೆ.
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೃಹ ಬಳಿಕೆ ಗ್ರಾಹಕರಿಗೆ ಬೆಳಗ್ಗೆ ಮತ್ತು ಸಂಜೆ ಒಂದು ಗಂಟೆ ಕಾಲ ನಿತ್ಯ ಎರಡು ಗಂಟೆ ಕಾಲ ಲೋಡ್ ಶೆಡ್ಡಿಂಗ್ ಮಾಡಲಾಗಿದೆ. ವಾಣಿಜ್ಯ ಬಳಕೆದಾರರು ಮತ್ತು ಕೈಗಾರಿಕೆಗಳಿಗೆ ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ಎರಡು ಗಂಟೆ ಕಾಲ ಲೋಡ್ ಶೆಡ್ಡಿಂಗ್ ಮಾಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಛತ್ತೀಸ್ ಗಡ ಮುಖ್ಯಮಂತ್ರಿ ಡಾ.ರಮಣ್ ಸಿಂಗ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜುಲೈ 26ರಂದು ಪ್ರಕಟಿಸಿದ್ದ ಪ್ರಕಾರ ಆಗಸ್ಟ್ ಒಂದರಿಂದಲೇ ಛತ್ತೀಸ್ ಗಡದಿಂದ ರಾಜ್ಯಕ್ಕೆ ವಿದ್ಯುತ್ ಪೂರೈಕೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ವಿಳಂಬವಾದ ಹಿನ್ನೆಲೆಯಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
(ದಟ್ಸ್ ಕನ್ನಡ ವಾರ್ತೆ)
ಚಾಮಲಾಪುರ ಸ್ಥಾವರ ಸ್ಪಾಪನೆ ಖಚಿತ : ಯಡಿಯೂರಪ್ಪ
ತದಡಿ ಯೋಜನೆಗೆ ತಡೆ ಇಲ್ಲ : ಈಶ್ವರಪ್ಪ ಸ್ಪಷ್ಟನೆ
ಆಗಸ್ಟ್ 1ರಿಂದ ವಿದ್ಯುತ್ ಕಡಿತಕ್ಕೆ ಕಡಿವಾಣ: ಈಶ್ವರಪ್ಪ
ಇನ್ನೆರಡು ತಿಂಗಳು ಲೋಡ್ ಶೆಡ್ಡಿಂಗ್ ಜಾರಿ : ಈಶ್ವರಪ್ಪ











Click it and Unblock the Notifications