ಅಮರನಾಥ ಭೂವಿವಾದ ಕೊನೆಗಾಣಿಸಲು ಸಮಿತಿ
ಜಮ್ಮು, ಆ. 7 : ಅಮರನಾಥ ಭೂವಿವಾದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ರಾಜ್ಯಪಾಲ ಎನ್.ಎನ್.ವೊಹ್ರಾ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಸಮಸ್ಯೆ ಬಗೆಹರಿಸುವ ಕುರಿತು ಅಮರನಾಥ ಸಂಘರ್ಷ ಸಮಿತಿಯೊಂದಿಗೆ ಮಾತುಕತೆ ನಡೆಸಲು ನಾಲ್ಕು ಜನ ತಜ್ಞರ ಸಮಿತಿಯನ್ನು ರಚಿಸಿರುವುದಾಗಿ ಘೋಷಿಸಿದ್ದಾರೆ.
ಗುರುವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆದ ಸರ್ವಪಕ್ಷಗಳ ಸಭೆ ಮುಕ್ತಾಯದ ಕೆಲ ಗಳಿಗೆಯಲ್ಲಿ ಸಮಿತಿ ನಿರ್ಧಾರ ಘೋಷಣೆಯಾಗಿರುವುದು ಪ್ರಮುಖ ಅಂಶವಾಗಿದೆ. ಪ್ರಧಾನಮಂತ್ರಿ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಮುಖಂಡರು ಅಮರನಾಥ ಭೂವಿವಾದದಿಂದ ಉದ್ಭವವಾಗಿರುವ ಸಮಸ್ಯೆಯನ್ನು ಶೀಘ್ರದಲ್ಲಿ ಕೊನೆಗಾಣಿಸಬೇಕು ಎನ್ನುವ ಒಕ್ಕೂರಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಮಿತಿ ರಚನೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಕಾಶ್ಮೀರ ರಾಜ್ಯಪಾಲರು ರಚಿಸಿರುವ ಸಮಿತಿಯಲ್ಲಿ ನಿವೃತ್ತ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಬ್ಲೂರೀಯಾ, ಜಮ್ಮು ಕಾಶ್ಮೀರ ವಿಶ್ವವಿದ್ಯಾಲಯದ ಉಪಕುಲಪತಿ ಅಮಿತಾಬ್ ಮಟ್ಟೂ, ಜಮ್ಮು ಕಾಶ್ಮೀರ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಜಿ.ಡಿ.ಶರ್ಮಾ, ಅಮರನಾಥ್ ಸಂಘರ್ಷ ಸಮಿತಿಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಬಿ.ಬಿ.ವ್ಯಾಸ್ ಅವರನ್ನು ಒಳಗೊಂಡಿದೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಅಮರನಾಥ್
ಭೂವಿವಾದ
:
ಸರ್ವಪಕ್ಷಗಳ
ಸಭೆಗೆ
ಕರೆ