ಆ.9ರಿಂದ 18ರವರೆಗೆ ಲೋಹದ ಹೂಗಳ ಪ್ರದರ್ಶನ
ಬೆಂಗಳೂರು, ಆ. 7 : ರೈತರೇ ಬಿಡುವಿನ ವೇಳೆಯಲ್ಲಿ ಮಾಡಿರುವ ಕಲಾತ್ಮಕ ಲೋಹದ ಹೂ, ಗಿಡಗಳ ಪ್ರದರ್ಶನವನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ಪ್ರಗತಿಪರ ಚಿಂತಕರಾದ ಯು. ಆರ್. ಅನಂತಮೂರ್ತಿಯವರು ಆಗಸ್ಟ್ 9ರಂದು ಶುಕ್ರವಾರ ಉದ್ಘಾಟಿಸಲಿದ್ದಾರೆ. ಈ ಪ್ರದರ್ಶನ ಆಗಸ್ಟ್ 18ರವರೆಗೆ ನಡೆಯಲಿದೆ.
ಎಂದೂ ಬಾಡದ ಹೂಗಳು ಈಗ ಗುಡಿ ಹೆರಿಟೇಜ್ ಹಟ್ ನಲ್ಲಿ ಅರಳಿ ನಿಂತಿವೆ. ತಾಮ್ರ ಮತ್ತು ಹಿತ್ತಾಳೆಯ ಹಾಳೆಗಳಿಂದ ಮಾಡಲ್ಪಟ್ಟಿರುವ ಈ ಹೂಗಳು ತಮ್ಮ ಸಹಜ ಗಡಸುತನವನ್ನು ಮರೆಮಾಚಿಸಿ, ಜೀವ ತುಂಬಿಕೊಂಡು ನಿಜದ ಹೂಗಳು ನಾಚುವಂತೆ ಮೂಡಿಬಂದಿವೆ. ನೈದಿಲೆ, ಕಮಲ, ದಾಸವಾಳ ಮುಂತಾದ ಹೂಗಳು ನಳನಳಿಸುತ್ತ ನಿಂತಿರುವದ್ದನ್ನು ನೋಡುವುದೇ ಒಂದು ಸೊಗಸು. ಈ ಹೂಗಳು ಸಹಜಾಕೃತಿಯಿಂದ ಹಿಡಿದು ಅದರ ಐದಾರು ಪಟ್ಟು ದೊಡ್ಡ ಗಾತ್ರದಲ್ಲಿವೆ ಎಂದು ಗುಡಿ ಬಳಗ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಗುಡಿ ಹೆರಿಟೇಜ್ ಹಟ್ : ಗುಡಿ ನಮ್ಮ ದೇಶದ ಕಲಾವಿದರ ಮತ್ತು ಕಲಾಸಕ್ತರ ನಡುವಿನ ಸಂಪರ್ಕ ಸೇತುವೆಯಾಗಿ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತನ್ನದೇ ಆದ ಸ್ವಂತ ಕಲಾಕೃತಿ ಮತ್ತು ಗೃಹೋಪಯೋಗಿ ವಸ್ತುಗಳನ್ನು ತಯಾರಿಸಲು ನಿರ್ಧರಿಸಿದೆ. ತನ್ಮೂಲಕ ಒಂದು ಸಮುದಾಯಕ್ಕೆ, ಮುಖ್ಯವಾಗಿ ರೈತಾಪಿ ಜನರನ್ನು ಕೇಂದ್ರವನ್ನಾಗಿರಿಸಿಕೊಂಡು ಕಳೆದ ಮೂರು ತಿಂಗಳಿಂದ ಬಹುಮುಖ ಪ್ರತಿಭೆಯ ಇಕ್ಬಾಲ್ ಅಹಮದ್ ಅವರ ಪರಿಕಲ್ಪನೆ, ವಿನ್ಯಾಸ ಮತ್ತು ಮಾರ್ಗದರ್ಶನದಂತೆ ಶಿಕಾರಿಪುರದ ಕೆಲ ರೈತಾಪಿ ಗೆಳೆಯರು ಅದ್ಭುತ ಎನ್ನಬಹುದಾದ ಲೋಹದ ಹೂ, ಗಿಡಗಳನ್ನು ನಿರ್ಮಿಸಿದ್ದಾರೆ. ಗುಡಿ ಕೈಗಾರಿಕೆಯನ್ನು ಕಲಾತ್ಮಕವಾಗಿ ಬೆಳೆಸುವ ಯೋಜನೆ ಗುಡಿಯದ್ದಾಗಿದ್ದು ಇದರಿಂದ ರೈತರು ತಮ್ಮ ಬಿಡುವಿನ ವೇಳೆಯಲ್ಲಿ ಮಾಡಬಹುದಾದ ಕಲಾಕೃತಿ ಅಥವಾ ಗೃಹೋಪಯೋಗಿ ವಸ್ತುಗಳಿಂದ ಅವರ ಆರ್ಥಿಕ ಸ್ಥಿತಿ ಉತ್ತಮಗೊಂಡು, ಸಾಮಾಜಿಕ ಮಾನ್ಯತೆ ಹೆಚ್ಚುತ್ತದೆ.
ಪ್ರದರ್ಶನ ನಡೆಯುವ ವಿಳಾಸ
ಗುಡಿ - ಹೆರಿಟೇಜ್ ಹಟ್
3352, ಕೆ.ಆರ್. ರಸ್ತೆ
ಬನಶಂಕರಿ 2ನೇ ಹಂತ
ಬೆಂಗಳೂರು - 560 070
ಪ್ರದರ್ಶನದ ವಿವರ
ದಿನಾಂಕ : ಆಗಸ್ಟ್ 9ರಿಂದ 18
ವೇಳೆ : ಬೆಳಿಗ್ಗೆ 10ರಿಂದ ಸಂಜೆ 8.30
ದೂರವಾಣಿ : 2676 1133, ಇಕ್ಬಾಲ್ ಅವರ ಮೊಬೈಲ್ : 94480 94494
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications