ಎಸ್ ಕೆ ಶಾಮಸುಂದರ ಅವರಿಗೆ ಮಾತೃ ವಿಯೋಗ
ಬೆಂಗಳೂರು, ಆ.4: ದಟ್ಸ್ ಕನ್ನಡ ಸಂಪಾದಕ ಎಸ್.ಕೆ .ಶಾಮಸುಂದರ ಅವರ ತಾಯಿ ಚಿತ್ರದುರ್ಗದ ಕಮಲಮ್ಮ ಕೇಶವಮೂರ್ತಿ ಅವರು ಭಾನುವಾರ ರಾತ್ರಿ ವಿಧಿವಶರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳಿಂದ ಅವರು ಐಸಿಯುನಲ್ಲಿದ್ದರು ಎಂದು ಕುಟುಂಬದವರು ಹೇಳಿದ್ದಾರೆ.
ದಟ್ಸ್ ಕನ್ನಡ ಅಂತರ್ಜಾಲ ತಾಣದ ಸಂಪಾದಕ ಎಸ್.ಕೆ .ಶಾಮಸುಂದರ ಸೇರಿದಂತೆ ಐವರು ಗಂಡು ಮಕ್ಕಳನ್ನು ಹಾಗೂ ಇಬ್ಬರು ಪುತ್ರಿಯರನ್ನು ಮೃತರು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಬನಶಂಕರಿಯ ರುದ್ರಭೂಮಿಯಲ್ಲಿ ಸೋಮವಾರ ಮಧ್ಯಾಹ್ನ ನೇರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಶಾಮ್ ಅವರ ಕುಟುಂಬದ ಹಿರಿಯರಾದ ನಟ ಎಸ್. ಜಿ.ಸೋಮಶೇಖರ್ ರಾವ್ ಹಾಗೂ ದತ್ತಣ್ಣ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ದಟ್ಸ್ ಕನ್ನಡತಂಡವು ಮೃತರ ಅಗಲಿಕೆಯನ್ನು ಸಹಿಸುವ ಶಕ್ತಿ ಅವರ ಕುಟುಂಬದವರಿಗೆ ನೀಡಲೆಂದು ಕೋರುತ್ತದೆ.
(ದಟ್ಸ್ ಕನ್ನಡವಾರ್ತೆ)