ಕರುಣಾನಿಧಿ ಮುಖಕ್ಕೆ ಸುಪ್ರಿಂ ಕೋರ್ಟ್ ಮಂಗಳಾರತಿ
ನವದೆಹಲಿ, ಆ. 04 : ವಿವಾದಿತ ಸೇತುಸಮುದ್ರಂ ಯೋಜನೆಗೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ಆದೇಶ ದಿಕ್ಕರಿಸಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಬಂದ್ ಆಚರಿಸಿರುವ ತಮಿಳುನಾಡು ಸರ್ಕಾರದ ಕ್ರಮವನ್ನು ಸುಪ್ರಿಂಕೋರ್ಟ್ ತೀವ್ರವಾಗಿ ಆಕ್ಷೇಪಿಸಿದೆ. ತಮಿಳನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಹಾಗೂ ಕೇಂದ್ರದ ಸಾರಿಗೆ ಮಂತ್ರಿ ಟಿ.ಆರ್.ಬಾಲು ಮತ್ತಿತರ ನಾಲ್ಕು ನಾಯಕರಿಗೆ ಛೀಮಾರಿ ಹಾಕಿದೆ. ನಾಲ್ಕು ವಾರಗಳಲ್ಲಿ ಬಂದ್ ಕುರಿತು ಸಮಗ್ರ ವರದಿ ಸಲ್ಲಿಸದಿದ್ದರೆ ಬಂಧನ ಅದೇಶವನ್ನು ಎದುರಿಸಬೇಕಾದಿತು ಎಂದು ಎಚ್ಚರಿಕೆ ಸಹ ನೀಡಿದೆ.
ನ್ಯಾಯಮೂರ್ತಿಗಳಾದ ಬಿ.ಎನ್.ಅಗರವಾಲ್ ಹಾಗೂ ನ್ಯಾ. ಜಿಎಸ್ಎಸ್ ಸಾಂಘ್ವಿ ಅವರನ್ನು ಒಳಗೊಂಡ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿದೆ. ಇವರೇನು ಕಾನೂನಿಗಿಂತ ದೊಡ್ಡ ವ್ಯಕ್ತಿಗಳೆ? ಇವರಿಗೆ ಸ್ವಲ್ಪವಾದರೂ ಹೊಣೆಗಾರಿಕೆ ಬೇಡವೆ? ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಇವರಿಗೆ ವಿವೇಚನೆ, ಸಾಮಾಜಿಕ ಜವಾಬ್ದಾರಿ ಇಲ್ಲವೆ? ಎಂದು ಸುಪ್ರಿಂಕೋರ್ಟ್ ತೀವ್ರವಾಗಿ ತರಾಟೆಗೆ ತಗೆದುಕೊಂಡಿದೆ.
ವಿಚಾರಣೆ ಹಂತದಲ್ಲಿರುವ ಹಾಗೂ ಭಾರಿ ವಿವಾದಕ್ಕೆ ಕಾರಣವಾಗಿರುವ ಸೇತುಸಮುದ್ರಂ ಯೋಜನೆಯನ್ನು ನಿರ್ಮಿಸುವುದು ಶತಸಿದ್ಧ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಕೇಂದ್ರ ಸಾರಿಗೆ ಸಚಿವ ಟಿ.ಆರ್. ಬಾಲು ನೇತೃತ್ವದಲ್ಲಿ 2007 ಅಕ್ಟೋಬರ್ 1ರಂದು ತಮಿಳುನಾಡು ಬಂದ್ ಕರೆ ನೀಡಲಾಗಿತ್ತು. ಬಂದ್ಗೆ ತಮಿಳನಾಡಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ನ್ಯಾಯಾಲಯದ ಮುಂದಿರುವ ವಿವಾದಿತ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕರುಣಾನಿಧಿ ಬಂದ್ ಕರೆ ನೀಡಿರುವುದನ್ನು ಪ್ರತಿಭಟಿಸಿ ಎಐಎಡಿಎಂಕೆ ನಾಯಕಿ ಜೆ.ಜಯಲಲಿತಾ ಸುಪ್ರಿಂಕೋರ್ಟ್ ಮೊರೆ ಹೋಗಿದ್ದರು. ಮುಖ್ಯಮಂತ್ರಿ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದಾರೆ ಎಂದು ಅವರ ವಿರುದ್ಧ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಸಮಗ್ರ ವರದಿ ಸಲ್ಲಿಸುವಂತೆ ತಮಿಳುನಾಡು ಸರ್ಕಾರ ಹಾಗೂ ಮುಖ್ಯಮಂತ್ರಿ ಕರುಣಾನಿಧಿ ಮತ್ತು ಟಿ.ಆರ್. ಬಾಲು ಅವರಿಗೆ ಸೂಚನೆ ನೀಡಿತ್ತು. ಆದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರು ಮಾತ್ರ ವರದಿಯನ್ನು ಸಲ್ಲಿಸಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ ಇನ್ನು ನಾಲ್ಕು ವಾರದೊಳಗೆ ವರದಿ ಸಲ್ಲಿಸದಿದ್ದರೆ ಬಂಧನ ಆದೇಶ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications