ಯುಪಿಎಯಿಂದ ಸಾಂಸ್ಕೃತಿಕ ಭಯೋತ್ಪಾದನೆ
ಚೆನ್ನೈ, ಜು. 31 : ಸೇತು ಸಮುದ್ರಂ ಕಡಲ್ಗಾಲುವೆ ಯೋಜನೆಗೆ ಐತಿಹಾಸಿಕ ರಾಮ ಸೇತುವೆಯನ್ನು ನಾಶ ಮಾಡಲು ಮುಂದಾಗಿರುವ ಕ್ರಮವನ್ನು ಭಾರತೀಯ ಜನತಾಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರದ ಯುಪಿಎ ಸರ್ಕಾರ ಹಿಂದುಗಳ ಭಾವನೆಗಳ ಮೇಲೆ ಸಾಂಸ್ಕೃತಿಕ ಭಯೋತ್ಪಾದನೆ ಆರಂಭಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರಾಮಸೇತು ಪ್ರದೇಶವನ್ನು ಐತಿಹಾಸಿಕ ಸ್ಮಾರಕ ಎಂದು ಘೋಷಿಸುವುದರ ಜತೆಗೆ ರಾಮಸೇತು ರಕ್ಷಣೆಗೆ ಬೇಕಿರುವ ಅಗತ್ಯ ಕ್ರಮಗಳನ್ನು ಕೈಗೊಂಡು ಅದನ್ನು ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಸೇತು ಸಮುದ್ರಂ ಯೋಜನೆಯನ್ನು ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.
ಐತಿಹಾಸಿಕ ಸ್ಮಾರಕವಾಗಿರುವ ರಾಮಸೇತುವೆಯನ್ನು ನಾಶಪಡಿಸಲು ಎಂದಿಗೂ ಬಿಡುವುದಿಲ್ಲ ಎಂದು ಎಚ್ಚರಿಸಿದ ಅವರು, ಅದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸುವವರೆಗೂ ಹೋರಾಟ ನಡೆಸಲಾಗುವುದು ಎಂದರು. ದೇಶ ಉಗ್ರರ ಹಾವಳಿಗೆ ನಲುಗಿದೆ. ಆದರೆ ಕೇಂದ್ರದ ಯುಪಿಎ ಸರ್ಕಾರ ರಾಮಸೇತು ನಾಶಪಡಿಸಲು ಮುಂದಾಗಿ ಅಮಾಯಕ ಹಿಂದುಗಳನ್ನು ಮತ್ತಷ್ಟು ಗಾಯಗೊಳಿಸಿದೆ. ಇದಕ್ಕೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಗೆ ಅಫಿಡ್ ವಿಟ್ ಸಲ್ಲಿಸಿರುವ ಪ್ರಕಾರ ರಾಮನೇ ಸೇತುವೆಯನ್ನು ನಾಶಪಡಿಸಿದ ಎನ್ನುವ ಅಂಶವನ್ನು ಸ್ಪಷ್ಟವಾಗಿ ನಿರಾಕಸಿದ ಅವರು, ಕೇಂದ್ರ ಸರ್ಕಾರ ಸುಳ್ಳು ವರದಿಯನ್ನು ಸಲ್ಲಿಸಿದ ಅವರ ವಿರುದ್ಧ ನಾವು ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜನಾಥ್ ಸಿಂಗ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ರಾಮಸೇತು ವಿವಾದ ಪರಿಹಾರಕ್ಕೆ ತಜ್ಞರ ಸಮಿತಿ
ರಾಮಸೇತು ರಾಷ್ಟ್ರೀಯ ಸ್ಮಾರಕವಲ್ಲ ಎಂದ ಕೇಂದ್ರ
ಕೇಂದ್ರದಿಂದ ಹಿಂದುಗಳ ಭಾವನೆಗೆ ಕೊಡಲಿಯೇಟು












Click it and Unblock the Notifications