ಅಣು ಒಪ್ಪಂದ: ಪ್ರಧಾನಿ ಮುಲಾಯಂ ಭೇಟಿ
ನವದೆಹಲಿ, ಜು.4: ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕರಾದ ಮುಲಾಯಂ ಸಿಂಗ್ ಯಾದವ್ ಹಾಗೂ ಅಮರ್ ಸಿಂಗ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಅಣು ಒಪ್ಪಂದಕ್ಕೆ ನಾವು ಯಾವುದೇ ಬೆಂಬಲ ಸೂಚಿಸಿಲ್ಲ. ಒಪ್ಪಂದಕ್ಕೆ ಸಂಬಂಧಿಸಿದ ನಮ್ಮ ಗ್ರಹಿಕೆಯನ್ನು ಪ್ರಧಾನಿ ಅವರೊಂದಿಗೆ ಹಂಚಿಕೊಳ್ಳಲು ಭೇಟಿಯಾಗಿದ್ದಾಗಿ ತಿಳಿಸಿದರು. ಇದೇ ವಿಚಾರವಾಗಿ ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಗುರುವಾರ ಸಂಜೆ ಸಮಾಜವಾದಿ ಪಕ್ಷದ ನಾಯಕರು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿ ಅದರ ಸಾಧಕ ಬಾಧಕಗಳನ್ನು ಕುರಿತು ಚರ್ಚಿಸಿದ್ದರು. ಈ ಒಪ್ಪಂದದಿಂದ ಭಾರತಕ್ಕೆ ಲಾಭವಾಗಲಿದೆ, ಈ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದು ಕಲಾಂ ತಿಳಿಸಿದ ಹಿನ್ನಲೆಯಲ್ಲಿ ಸಮಾಜವಾದಿ ಪಕ್ಷ ಬೆಂಬಲ ಸೂಚಿಸುವ ಲಕ್ಷಣಗಳು ಕಾಣಿಸುತ್ತಿವೆ. ಸಮಾಜವಾದಿ ಪಕ್ಷದ ನಾಯಕರು ಪ್ರಧಾನಿಯವರನ್ನು ಭೇಟಿಯಾಗುವುದಕ್ಕೂ ಮುನ್ನ ಕಾಂಗ್ರೆಸ್ ನಾಯಕರಾದ ಮುನ್ನ ಪ್ರಣಬ್ ಮುಖರ್ಜಿ, ಎ.ಕೆ.ಆಂಟೋನಿ ಮತ್ತು ಅಹ್ಮದ್ ಪಟೇಲ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಚರ್ಚಿಸಿದ್ದರು.
ದೇಶಕ್ಕೆ ಲಾಭದಾಯಕವಾಗಲಿರುವ ಅಣು ಒಪ್ಪಂದಲ್ಲಿ ರಾಜಕೀಯ ಸಲ್ಲದು ಎಂದು ಸಮಾಜವಾದಿ ಪಕ್ಷದ ನಾಯಕರು ಪ್ರತಿಕ್ರಿಯಿಸಿದ್ದಾರೆ. ಇದಕ್ಕೂ ಮುನ್ನ ನಡೆದ ಸಂಯುಕ್ತ ರಾಷ್ಟ್ರೀಯ ಪ್ರಗತಿಕೂಟದ (ಯುಎನ್ಪಿಎ) ಸಭೆಯಲ್ಲಿ ಅಣು ಒಪ್ಪಂದಕ್ಕೆ ಬೆಂಬಲ ಕೊಡುವ ಕುರಿತು ಮತ್ತಷ್ಟು ದೀರ್ಘ ಚರ್ಚೆ ನಡೆಸಿ ಜುಲೈ 6ರ ಒಳಗೆ ತಮ್ಮ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಇಂಡಿಯನ್ ನ್ಯಾಷನಲ್ ಲೋಕದಳ್ ಮುಖ್ಯಸ್ಥ ಓಂ ಪ್ರಕಾಶ್ ಚೌತಾಲ ತಿಳಿಸಿದ್ದಾರೆ.
ನಾಲ್ಕು ವರ್ಷಗಳಿಂದ ಸರಾಗವಾಗಿ ನಡೆದುಕೊಂಡು ಬರುತ್ತಿರುವ ಕೇಂದ್ರ ಸರ್ಕಾರದ ಮೇಲೆ ಅಣು ಬಾಂಬ್ನಂತೆ ಬಿದ್ದ ಅಣು ಒಪ್ಪಂದವನ್ನು ಎಡಪಕ್ಷಗಳು ತೀವ್ರವಾಗಿ ವಿರೋಧಿಸಿದ್ದವು. ಕೇಂದ್ರ ಸರ್ಕಾರಕ್ಕೆ ಕೊಟ್ಟಿರುವ ಬಾಹ್ಯ ಬೆಂಬಲವನ್ನು ಹಿಂಪಡೆದುಕೊಳ್ಳಲು ಅಣಿಯಾಗಿದ್ದವು. ಅಣು ಒಪ್ಪಂದ ದೇಶಕ್ಕೆ ಲಾಭವಾಗಲಿದೆ ಎಂದಿರುವ ಅಬ್ದುಲ್ ಕಲಾಂರ ಹೇಳಿಕೆ ಹಾಗೂ ಸಮಾಜವಾದಿ ಪಕ್ಷ-ಪ್ರಧಾನಿ ಭೇಟಿ ಕೇಂದ್ರ ಸರ್ಕಾರಕ್ಕೆ ತುಸು ಸಮಾಧಾನ ತಂದಿದೆ. ಏತನ್ಮಧ್ಯೆ ಜು.14ರಿಂದ ಎಡಪಕ್ಷಗಳು ಅಣು ಒಪ್ಪಂದದ ವಿರುದ್ಧ ಜಾಥಾ ಆರಂಭಿಸುವುದಾಗಿ ತಿಳಿಸಿವೆ.
(ಏಜೆನ್ಸೀಸ್)