ಸಂಚಾರಿ ಪೀಠಕ್ಕೆ ಚಾಲನೆ; ಜು.7ರಿಂದ ಕಾರ್ಯಾರಂಭ
ಹುಬ್ಬಳ್ಳಿ, ಜು. 4 : ಉತ್ತರ ಕರ್ನಾಟಕ ಜನತೆಯ ಐದು ದಶಕಗಳ ನಿರಂತರ ಹೋರಾಟಕ್ಕೆ ಶುಕ್ರವಾರ ಫಲ ದೊರೆತಿದೆ. ಸುಪ್ರಿಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಾ. ಕೆ.ಜಿ.ಬಾಲಕೃಷ್ಣನ್ ಅಧಿಕೃತವಾಗಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಜು .7 ರಿಂದ ಹೈಕೋರ್ಟ್ ಸಂಚಾರಿ ಪೀಠ ಕಾರ್ಯಾರಂಭ ಮಾಡುವ ಮೂಲಕ ಈ ಭಾಗದ ಜನರ ಬಹುದಿನಗಳ ಮಹತ್ವದ ಕನಸೊಂದು ಈಡೇರಿದಂತಾಗಿದೆ.
ಹೈಕೋರ್ಟ ಸಂಚಾರಿ ಪೀಠ ಉದ್ಘಾಟಿಸಿ ಮಾತನಾಡಿದ ಮುಖ್ಯನ್ಯಾಯಮೂರ್ತಿ ಡಾ. ಕೆ.ಜಿ.ಬಾಲಕೃಷ್ಣನ್, ಕರ್ನಾಟಕದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಉದ್ಘಾಟನೆಯಾಗಿರುವುದು ಸಂತೋಷದ ಸಂಗತಿ. ಇದೊಂದು ಸಂತಸದ ದಿನವಾಗಿದೆ ಎಂದು ಹೇಳಿದರು.
ಈ ಭಾಗದ ಅನೇಕ ಸಾಹಿತಿಗಳ, ಬುದ್ದಿಜೀವಿಗಳ, ನ್ಯಾಯವಾದಿಗಳ, ನಾಗರೀಕರ ದಶಕಗಳ ಬೇಡಿಕೆಯನ್ನು ಈಡೇರಿಸಿದ ಸಾರ್ಥಕತೆ ಬಿಜೆಪಿ ಸರ್ಕಾರದ್ದಾಗಿದೆ. ನನ್ನ ಅಧಿಕಾರವಧಿಯಲ್ಲಿ ಉತ್ತರ ಕರ್ನಾಟಕದ ಜನರ ಭಾವನೆಗಳಿಗೆ, ಅಭಿಮಾನಕ್ಕೆ ಸ್ಪಂದಿಸಿದ ಅತ್ಯಂತ ಮಹತ್ವ ಕ್ಷಣ ನನ್ನದಾಗಿರುವುದು ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾವುಕರಾಗಿ ನುಡಿದರು.
ಬ್ರಿಟಿಷ್ ರ ಕಾಲದಲ್ಲಿಯೇ ಧಾರವಾಡದಲ್ಲಿ ಹೈಕೋರ್ಟ್ ಕಾರ್ಯ ನಿರ್ವಹಿಸುತ್ತಿತ್ತು. 1962ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಡಿ.ಜತ್ತಿ ಈ ಭಾಗದಲ್ಲಿ ಹೈಕೋರ್ಟ್ ಸ್ಫಾಪನೆಯಾಗಬೇಕು ಎನ್ನುವ ಕುರಿತು ಪ್ರಸ್ತಾಪಿಸಿದ್ದರು. ಜತೆಗೆ ಶೇಷಾದ್ರಿ ಸಮಿತಿಯನ್ನು ರಚನೆ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಸಂಚಾರಿ ಹೈಕೋರ್ಟ್ ಸ್ಥಾಪನೆ ಸಾಧ್ಯವಾಗಿರಲಿಲ್ಲ. ಹೈಕೋರ್ಟ್ ಸ್ಥಾಪನೆಯಲ್ಲಿ ಅನೇಕ ಸಮಸ್ಯೆಗಳು ಅಡ್ಡ ಬಂದಿದ್ದರೂ ಅವೆಲ್ಲವುಗಳನ್ನು ಬದಿಗೊತ್ತಿ ಸಂಚಾರಿ ಪೀಠ ಸ್ಥಾಪನೆಗೆ ಸರ್ಕಾರ ಎಲ್ಲ ಸಹಕಾರ ನೀಡಿದೆ. ಇದರ ತೃಪ್ತಿ, ಹೆಮ್ಮೆ ನಮಗಿದೆ ಎಂದ ಹೇಳಿದರು.
ಧಾರವಾಡ ಮತ್ತು ಗುಲ್ಬರ್ಗಾದಲ್ಲಿ ಸಂಚಾರಿ ಹೈಕೋರ್ಟ್ ಪೀಠವನ್ನು ಸ್ಥಾಪಿಸಬೇಕು ಎನ್ನುವ ಕುರಿತು ಜಸ್ವಂತ್ ಸಿಂಗ್ ಆಯೋಗವನ್ನು ರಚಿಸಲಾಗಿತ್ತು. ಸುದೀರ್ಘ ವಿಚಾರಣೆ, ಚರ್ಚೆಯ ನಂತರ ಆಯೋಗ 2004ರ ಅಕ್ಟೋಬರ್ 19 ರಂದು ಸಂಚಾರಿ ಪೀಠ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿತು. ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ನಾನು 2005 ಆಗಸ್ಟ್ 15 ರಂದು ಹೈಕೋರ್ಟ್ ಪೀಠ ಕಾಮಗಾರಿಗೆ ಶಂಕು ಸ್ಫಾಪನೆ ಮಾಡಲಾಯಿತು. ಅದಕ್ಕಾಗಿ ಬಜೆಟ್ ನಲ್ಲಿ 75 ಕೋಟಿ ರು.ಗಳನ್ನು ನೀಡಲಾಗಿತ್ತು. ಇದೀಗ ಅದರ ಹಣ 115 ಕೋಟಿ ರುಪಾಯಿಯಾಗಿದೆ. ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನವನ್ನು ಸರ್ಕಾರ ನೀಡಲಿದೆ ಎಂದರು.
ವಸತಿ ಗೃಹಗಳ ನಿರ್ಮಾಣಕ್ಕೆ ಶೀಘ್ರ ಚಾಲನೆ
ಹೈಕೋರ್ಟ್ ನಲ್ಲಿ ಕೆಲಸ ನಿರ್ವಹಿಸುವ ನ್ಯಾಯಮೂರ್ತಿಗಳು ಹಾಗೂ ಸಿಬ್ಬಂದಿಗಳಿಗೆ ಸರ್ಕಾರ ವಸತಿ ವ್ಯಸಸ್ಥೆಯನ್ನು ಶೀಘ್ರದಲ್ಲಿ ಕಲ್ಪಿಸಲಿದೆ ಎಂದ ಯಡಿಯೂರಪ್ಪ, ಹೈಕೋರ್ಟ್ ಪೀಠದ ಪಕ್ಕದಲ್ಲಿರುವ ಕೆಐಡಿಬಿ ಇಲಾಖೆಗೆ ಸಂಬಂಧಿಸಿದ ಸರ್ಕಾರಿ ಸ್ಥಳದಲ್ಲಿ ನ್ಯಾಯಮೂರ್ತಿಗಳಿಗಾಗಿ 24 ಸುವ್ಯವಸ್ಥೆಯ ಮನೆ ಹಾಗೂ 48 ಸಿಬ್ಬಂದಿಗಳಿಗೆ ವಸತಿಯ ವ್ಯವಸ್ಥೆ ಮಾಡುವ ಕುರಿತು ಈಗಾಗಲೇ ಆದೇಶ ನೀಡಲಾಗಿದೆ ಎಂದು ಹೇಳಿದರು.
ಬೆಂಗಳೂರಿಗೆ ಸುಪ್ರಿಂಕೋರ್ಟ್ ನ ಸಂಚಾರಿ ಪೀಠ
ಇದೇ ಸಂದರ್ಭದಲ್ಲಿ ಮಹತ್ವದ ವಿಷಯವನ್ನು ಬೆಳಕಿಗೆ ತಂದ ಯಡಿಯೂರಪ್ಪ ದಕ್ಷಿಣ ಭಾರತದಲ್ಲಿ ಸುಪ್ರಿಕೋರ್ಟ್ ಸಂಚಾರಿ ಪೀಠವನ್ನು ಸ್ಫಾಪಿಸುವ ಅಗತ್ಯವಿದ್ದು, ಬೆಂಗಳೂರು ಜಗತ್ತಿನಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಆದ್ದರಿಂದ ಬೆಂಗಳೂರಿನಲ್ಲಿ ಸುಪ್ರಿಂಕೋರ್ಟ್ ಸಂಚಾರಿ ಪೀಠ ಕಾರ್ಯರಂಭ ಮಾಡಬೇಕು ಎಂದು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್ ಅವರಿಗೆ ಮನವಿ ಮೂಲಕ ಒತ್ತಾಯಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications