ಅಕ್ರಮ ಸಕ್ರಮ ಯೋಜನೆಗೆ ನೂತನ ನೀತಿ ಜಾರಿ
ಬೆಂಗಳೂರು, ಜು. 4 : ಅಕ್ರಮ ಸಕ್ರಮ ಯೋಜನೆ ಹಾಗೂ ಮೌಲ್ಯ ಆಧಾರಿತ ಅಸ್ತಿ ಪದ್ಧತಿ(ಸಿವಿಎಸ್) ಈ ತಿಂಗಳ ಅಂತ್ಯದೊಳಗೆ ಜನ ಸಾಮಾನ್ಯರಿಗೆ ಹೊರೆಯಾಗದಂತೆ ಭಾರಿ ಬದಲಾವಣೆಯೊಂದಿಗೆ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ಹಾಗೂ ಸಂಪುಟ ಉಪಸಮಿತಿಯ ಅಧ್ಯಕ್ಷರೂ ಆಗಿರುವ ಆರ್. ಅಶೋಕ್ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದೆ ಅವರು, ಈ ಎರಡು ಯೋಜನೆಯಲ್ಲಿ ಜನ ಸಾಮಾನ್ಯರ ಮೇಲೆ ಹೇರಲಾಗಿರುವ ಹೊರೆಯನ್ನು ಕಡಿಮೆ ಮಾಡಲಾಗುವುದು ಎಂದರು. ಸಿವಿಎಸ್ ನಲ್ಲಿ ಜನಸಂಖ್ಯೆ ಆಧಾರದ ಮೇಲೆ ತೆರಿಗೆ ವಿಧಿಸಲಾಗುವುದು. ಆ ರೀತಿ ಮಾಡಿದರೆ ಎರಡು ಲಕ್ಷ ಜನ ಸಂಖ್ಯೆ ಇರುವ ಗುಲ್ಬರ್ಗ ಹಾಗೂ ಅಷ್ಟೇ ಜನರಿರುವ ಬೆಂಗಳೂರು ಗ್ರಾಮಂತರ ಜಿಲ್ಲೆಯ ಆನೇಕಲ್ ನಲ್ಲಿ ತೆರಿಗೆ ಒಂದೇ ಪ್ರಮಾಣದಾಗಿರುತ್ತದೆ.
ಆದರೆ ಗುಲ್ಬರ್ಗಾ ಮತ್ತು ಅನೇಕಲ್ ನಲ್ಲಿನ ಆಸ್ತಿ ಮೌಲ್ಯಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ಪ್ರದೇಶವಾರು ತೆರಿಗೆ ನಿಗದಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ, 5 ನಗರ ಪಾಲಿಕೆಗಳಿಗೆ ಒಂದೇ ಪ್ರಮಾಣದಲ್ಲಿ, ಹಾಗೂ ಇತರ ಪ್ರದೇಶಗಳಿಗೆ ಬೇರೆ ತೆರಿಗೆ ವಿಧಸಬೇಕು ಎನ್ನುವ ಸಲಹೆ ಕೇಳಿ ಬಂದಿದೆ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದರು.
ಅಕ್ರಮ ಸಕ್ರಮ ಮತ್ತು ಸಿವಿಎಸ್ ಪದ್ಧತಿಗಳ ಪರಿಶೀಲನೆಗಾಗಿ ಸಾರಿಗೆ ಸಚಿವ ಆರ್. ಅಶೋಕ್ ಅಧ್ಯಕ್ಷತೆಯಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ ಹಾಗೂ ಸುರೇಶ್ ಕುಮಾರ್ ನೇತೃತ್ವದಲ್ಲಿ ಉಪಸಮಿತಿ ರಚನೆ ಮಾಡಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications