ಜಾತ್ಯಾತೀತರೊಂದಿಗೆ ಬಂಗಾರಪ್ಪ ಮಿಲಾಕತ್ತು
ಶಿಕಾರಿಪುರ, ಮೇ 16: ಕೋಮುವಾದಿಗಳನ್ನು ಸೋಲಿಸಲು ಶಿಕಾರಿಪುರದಲ್ಲಿ ಸ್ಪರ್ಧಿಸಿದ್ದೇನೆ. ಅತಿಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸುವೆ ಎಂಬ ವಿಶ್ವಾಸವನ್ನು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಶಿಕಾರಿಪುರದಲ್ಲಿ ಇಂದು ವ್ಯಕ್ತಪಡಿಸಿದರು.
ಸೊರಬ ಕ್ಷೇತ್ರದಲ್ಲಿ ಮತದಾನ ಮಾಡಿದ ನಂತರ ಶಿಕಾರಿಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅಧಿಕಾರದಿಂದ ಕೋಮುವಾದಿಗಳನ್ನು ದೂರವಿಡುವ ಏಕೈಕ ಉದ್ದೇಶದಿಂದ ನಾನು ಶಿಕಾರಿಪುರದಲ್ಲಿ ಸ್ಪರ್ಧಿಸಿರುವೆ, ನನ್ನ ಅಂತಿಮ ಗುರಿಯೂ ಬಿಜೆಪಿಯನ್ನು ಸೋಲಿಸುವುದು ಎಂದು ಬಂಗಾರಪ್ಪ ಖಂಡತುಂಡವಾಗಿ ಹೇಳಿದರು.
ಸಮಾಜವಾದಿ ಪಕ್ಷ ಚುನಾವಣೆ ಪೂರ್ವದಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಂಡಿಲ್ಲ. ನನ್ನನ್ನು ಬೆಂಬಲಿಸಿ ಎಂದು ಯಾರನ್ನೂ ಕೇಳಿಕೊಂಡಿಲ್ಲ ಎಂದು ಅವರು, ಒಂದು ವೇಳೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಜಾತ್ಯಾತೀತ ಪಕ್ಷಗಳೊಂದಿಗೆ ಕೈಜೋಡಿಸಲು ಸಿದ್ಧ ಎಂದು ಹೇಳಿದರು.
ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ರಾಜ್ಯದಲ್ಲಿ ಪ್ರಜ್ಞಾವಂತ ಮತದಾರರಿದ್ದಾರೆ. ಕೋಮುವಾದಿಗಳ ಕೈಗೆಅಧಿಕಾರ ನೀಡಲು ಅವಕಾಶ ಕೊಡುವುದಿಲ್ಲ. ಚುನಾವಣೆ ಪೂರ್ವದಲ್ಲಿ ನಡೆದಿರುವ ಸಮೀಕ್ಷೆಗಳನ್ನು ಮತದಾರರು ಧೂಳಿಪಟ ಮಾಡಲಿದ್ದಾರೆ ಎಂದು ಬಂಗಾರಪ್ಪ ಭವಿಷ್ಯ ನುಡಿದರು.
(ದಟ್ಸ್ ಕನ್ನಡ ವಾರ್ತೆ)