ಚುನಾವಣೆ ಪೂರ್ವ ಸಮೀಕ್ಷೆ ನಿಷೇಧಿಸಿ: ಯಡ್ಡಿ
ಉಡುಪಿ,ಮೇ 5: ರಾಜ್ಯ ಚುನಾವಣೆ ಆಯೋಗ ಮಾಧ್ಯಮಗಳು ಪ್ರಕಟಿಸಲು ಉದ್ದೇಶಿಸಿರುವ ಚುನಾವಣೆ ಪೂರ್ವ ಸಮೀಕ್ಷೆಗಳನ್ನು ನಿಷೇಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಪೂರ್ವ ಸಮೀಕ್ಷೆಯಿಂದ ಮತದಾರರ ಮೇಲೆ ತೀವ್ರ ಪರಿಣಾಮ ಬೀರುತ್ತವೆ, ಚುನಾವಣೆ ಪೂರ್ವ ಸಮೀಕ್ಷೆಗಳು ಅವೈಜ್ಞಾನಿಕವಾಗಿದ್ದು, ಜನರನ್ನು ದಾರಿ ತಪ್ಪಿಸುವ ಕುತಂತ್ರದ ಕೆಲಸವಾಗಿದೆ ಎಂದು ಅವರು ಕಿಡಿಕಾರಿದರು.
ಕೆಲವೆ ಸಾವಿರ ಜನರು ಹಾಕುವ ಮತಗಳು ಒಂದೀಡಿ ರಾಜ್ಯಕ್ಕೆ ಹೋಲಿಸಿ ಸಮೀಕ್ಷೆ ನೀಡುವುದು ಸರಿಯಾದ ಕ್ರಮವಲ್ಲ. ಸ್ವಾತಂತ್ರ ನಂತರ ನಡೆದ ಎಲ್ಲ ಚುನಾವಣೆಯಲ್ಲಿ ಇಂತಹ ಪೂರ್ವ ಸಮೀಕ್ಷೆಗಳನ್ನು ಪ್ರಕಟಿಸಲಾಗಿದೆ. ಆದರೆ ಎಲ್ಲವೂ ಸುಳ್ಳಾಗಿವೆ, ಆದ್ದರಿಂದ ಜನರ ದಾರಿ ತಪ್ಪಿಸುವ ಇಂತಹ ಕೆಲಸಗಳಿಗೆ ತಡೆವೊಡ್ಡಬೇಕು ಎಂದು ಚುನಾವಣೆ ಆಯೋಗಕ್ಕೆ ಯಡಿಯೂರಪ್ಪ ಮನವಿ ಮಾಡಿಕೊಂಡರು.
ದೇಶದ ಗಮನ ಸೆಳೆದಿದ್ದ ಗುಜರಾತ ಚುನಾವಣೆಯಲ್ಲಿ ಏನಾಯಿತು, ಘಟಾನುಘಟಿ ಪತ್ರಿಕೆಗಳು, ಟಿವಿಗಳು, ಪತ್ರಕರ್ತರು ಬಿಜಿಪಿಯನ್ನು ಸೋಲಿಸಲು ಸುಳ್ಳು ಪೂರ್ವ ಸಮೀಕ್ಷೆಯನ್ನು ನೀಡಿ, ಜನರ ದಿಕ್ಕು ತಪ್ಪಿಸಲು ಯತ್ನಿಸಿದರು. ಆದರೆ ಅಲ್ಲಿ ಏನಾಯಿತು ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಆದ್ದರಿಂದ ಸಮೀಕ್ಷೆಯನ್ನು ಯಾರು ನಂಬಬಾರದು ಅದು ಶುದ್ಧ ಸುಳ್ಳಿನ ಕಂತೆ ಎಂದು ಹರಿಹಾಯ್ದರು.
ಕಾಂಗ್ರೆಸ್ ನಮ್ಮ ಪ್ರಥಮ ಎದುರಾಳಿ. ಕಾಂಗ್ರೆಸ್ ಪಕ್ಷದ ನಾಯಕರಿಗೆ ದೈರ್ಯವಿದ್ದರೆ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ಪ್ರಕಟಿಸಲಿ ಎಂದು ಸವಾಲು ಹಾಕಿದ ಯಡಿಯೂರಪ್ಪ, ಕಾಂಗ್ರೆಸ್ ಪಕ್ಷ ಆಂತರಿಕ ಕಚ್ಚಾಟದಲ್ಲಿ ಮುಳುಗಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಎಸ್.ಎಂ.ಕೃಷ್ಣ, ಸಿದ್ಧರಾಮಯ್ಯ, ಸಿ.ಕೆ.ಜಾಫರ್ ಷರೀಫ್ ಮತ್ತು ಮಲ್ಲಿಕಾರ್ಜುನ ಖರ್ಗೆ ಕಾದು ಕುಳಿತಿದ್ದಾರೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರು ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸಲಿ ಎಂದು ಕೆಣಕಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಒಳಸಂಚು ರೂಪಿಸಿ ನನ್ನ ವಿರುದ್ಧ ಸಮಾಜವಾದಿ ಪಕ್ಷದ ಅಧ್ಯಕ್ಷ ಬಂಗಾರಪ್ಪ ಅವರನ್ನು ನಿಲ್ಲಿಸಿವೆ. ಆದರೆ ಶಿಕಾರಿಪುರದ ಜನ ಬಿಜೆಪಿಯನ್ನು ಆರಿಸಬೇಕು ಎಂದು ತೀರ್ಮಾನಿಸಿರುವಾಗ ಯಾರು ಬಂದು ನಿಂತರೂ ಗೆಲುವು ನನ್ನದೇ ಎಂದು ಭಾವವೇಶದಿಂದ ನುಡಿದರು.
(ದಟ್ಸ್ ಕನ್ನಡ ವಾರ್ತೆ)