ಈಜುಕೊಳದ ಸಿಬ್ಬಂದಿ ನಿರ್ಲಕ್ಷ್ಯ : ತಂತ್ರಜ್ಞನ ಸಾವು
ಬೆಂಗಳೂರು, ಏ.20: ಜಯನಗರ ಸಾರ್ವಜನಿಕ ಈಜುಕೊಳದ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಸಾಫ್ಟ್ವೇರ್ ಇಂಜಿನಿಯರ್ ಸ್ಮೃತಿ ರಂಜನ್ ಶರ್ಮ(27) ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರಕರಣ ಏ.16 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜೆಪಿ ನಗರ ಒಂದನೇ ಹಂತದ ನಿವಾಸಿ ಸ್ಮೃತಿ ರಂಜನ್ ಶರ್ಮ ಕೋರಮಂಗಲ ಒಂದನೇ ಬ್ಲಾಕ್ನಲ್ಲಿರುವ ಸಿಜಿ ಕೋರಲ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನೀರನ್ನು ಕಂಡರೆ ಭಯಪಡುತ್ತಿದ್ದ ಅವರು, ಸ್ನೇಹಿತರೊಬ್ಬರ ಸಲಹೆಯಂತೆ ಈಜು ಕಲಿಯಲು ನಿರ್ಧರಿಸಿದ್ದರು. ಜಯನಗರ3ನೇ ಬ್ಲಾಕ್ನ ಈಜುಕೊಳದಲ್ಲಿ ಏ.2 ರಿಂದ 21 ರವರೆಗೆ ನಡೆಯುತ್ತಿದ್ದ ಈಜು ತರಬೇತಿ ಶಿಬಿರಕ್ಕೆ ಸೇರಿದ್ದರು. ಪ್ರತಿದಿನ ರಾತ್ರಿ 8.45 ರಿಂದ 9.45ರವರೆಗೆ ಅವರ ಸಮಯ ನಿಗದಿಯಾಗಿತ್ತು.
ಸ್ನೇಹಿತ ಸುದರ್ಶನ್ ಎಂಬುವರ ಜತೆ ಪ್ರತಿದಿನ ಈಜುಕೊಳಕ್ಕೆ ತೆರಳುತ್ತಿದ್ದ ಅವರು, ಏ. 16 ರಂದು ರಾತ್ರಿ ಒಬ್ಬರೇ ತೆರಳಿದ್ದರು. ಈಜಾಡಲು ಕೊಳಕ್ಕೆ ಇಳಿದ ಶರ್ಮ, 15ನಿಮಿಷಗಳ ಕಾಲ ಮೇಲೆ ಬರಲೇ ಇಲ್ಲ. ಆ ಸಂದರ್ಭದಲ್ಲಿ ತರಬೇತುದಾರರು ಅಲ್ಲಿರಲಿಲ್ಲ. ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಡಾ. ವೆಂಕಟೇಶ್ ಹಾಗೂ ಅವರ ಸ್ನೇಹಿತರು ಅಪೋಲೊ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಐಸಿಯುಯಲ್ಲಿದ್ದ ಶರ್ಮ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.
ತರಬೇತುದಾರನ ಬಂಧನ:
ಈಜುಕೊಳ ಮಾಲೀಕರು, ಆಡಳಿತ ಮಂಡಳಿ ಹಾಗೂ ತರಬೇತುದಾರರ ವಿರುದ್ಧ ಮೃತರ ಸಹೋದರ ಶಿವಾಜಿರಾವ್ ಶರ್ಮ ಎಂಬುವರು ತಿಲಕ್ನಗರ ಠಾಣೆಗೆ ದೂರು ನೀಡಿದ್ದಾರೆ. ತರಬೇತುದಾರ ನಟರಾಜ್ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಶರ್ಮ ಸ್ನೇಹಿತ ಸುದರ್ಶನ್ ಪ್ರಕಾರ, ಈಜು ತರಬೇತಿ ಪಡೆದು ರಾತ್ರಿ 10:30 ರ ಒಳಗೆ ಮನೆಗೆ ಬರುತ್ತಿದ್ದ ಶರ್ಮ, ಏ16 ರಂದು ತಡರಾತ್ರಿಯಾದರೂ ಬರಲಿಲ್ಲ.
ಇದರಿಂದ ಗಾಬರಿಗೊಂಡು ಈಜುಕೊಳದ ಬಳಿ ಹೋದಾಗ, ಕಾರು ಮಾತ್ರ ಇತ್ತು. ತರಬೇತು ದಾರರನ್ನು ವಿಚಾರಿಸಿದಾಗ ಸಣ್ಣ ಆಘಾತವಾಗಿದೆ. ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಉತ್ತರ ಬಂತು. ತಕ್ಷಣ ಶರ್ಮ ಸಹೋದರ ಶಿವಾಜಿರಾವ್ ಅವರಿಗೆ ವಿಷಯ ತಿಳಿಸಲಾಯಿತು'. ಪೊಲೀಸರ ಪ್ರಕಾರ, ಈಜಾಡುತ್ತಿದ್ದ ಶರ್ಮ ಕಾಲಿಗೆ ಹುಲ್ಲು ಸುತ್ತಿಕೊಂಡು ನೀರಿ ನಲ್ಲಿ ಮುಳುಗಿದ್ದರು. ತಕ್ಷಣ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಪ್ರಯೋಜನ ವಾಗಲಿಲ್ಲ ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications