ಮಹಾರಾಷ್ಟ್ರ ರಾಜ್ಯಪಾಲರ ಹುದ್ದೆಗೆ ಕೃಷ್ಣ ರಾಜೀನಾಮೆ
ಮುಂಬೈ, ಮಾ.5: ಮಹಾರಾಷ್ಟ್ರದ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರು ರಾಷ್ಟ್ರಪತಿ ಪ್ರತಿಭಾ ಪಾಟೀಲರನ್ನು ಭೇಟಿ ಮಾಡಿ ತಮ್ಮ ಹುದ್ದೆಗೆ ಇಂದು ರಾಜೀನಾಮೆ ಸಲ್ಲಿಸಿದರು. ರಾಜಿನಾಮೆ ನೀಡಿರುವುದರಿಂದ ರಾಜ್ಯ ರಾಜಕೀಯಕ್ಕೆ ಸಕ್ರಿಯವಾಗಿ ಮರಳಲು ವೇದಿಕೆ ಸಿದ್ಧವಾದಂತಾಗಿದೆ.
ಇದಕ್ಕೂ ಮುನ್ನ ಮಹಾರಾಷ್ಟ್ರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ , ರಾಜಕೀಯ ಒಂದು ಯುದ್ಧಭೂಮಿ, ಕಾಂಗ್ರೆಸ್ ವಿರೋಧಿಗಳ ವಿರುದ್ಧ ಹೋರಾಟಕ್ಕೆ ಸಿದ್ಧ ಎಂದು ರಾಜ್ಯ ರಾಜಕೀಯಕ್ಕೆ ಮರಳುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಜಕೀಯ ವಿರೋಧಿಗಳ ವಿರುದ್ಧ ಪಾಂಚಜನ್ಯ ಮೊಳಗಿಸಿದರು. ಹೆಮ್ಮೆಯಿಂದ ತವರಿಗೆ ಮರಳುತ್ತಿದ್ದೇನೆ. ಪಕ್ಷ ನೀಡುವ ಯಾವುದೇ ಜವಾಬ್ದಾರಿ ಹೊರಲು ಸಿದ್ಧ ಎಂದು ಹೇಳಿದರು.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮೇ ಅಂತ್ಯದಲ್ಲಿ ನಡೆಯುವುದು ಖಚಿತವಾಗಿರುವುದರಿಂದ ಕೃಷ್ಣ ತಮ್ಮ ಮುಂದಿನ ರಾಜಕೀಯ ನಡೆಗಳನ್ನು ತಿಳಿಸಲು ಪತ್ರಿಕಾಗೋಷ್ಠಿ ಕರೆದಿದ್ದರು. ಈ ನಿಟ್ಟಿನಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೂಡ ಬುಧವಾರ ಭೇಟಿ ಮಾಡಿದ್ದರು.
ಕೃಷ್ಣರ ಆಗಮನದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಧುತ್ತನೆ ಎದುರಾಗಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ, ವಿಧಾನಸಭೆ ಚುನಾವಣೆಯಲ್ಲಿ ಮೊದಲು ಬಹುಮತ ದೊರೆಯಬೇಕು. ಅನಂತರವಷ್ಟೇ ಮುಖ್ಯಮಂತ್ರಿ ಆಯ್ಕೆ ಪ್ರಶ್ನೆಗೆ ಉತ್ತರ ಸಿಗುತ್ತದೆ ಎಂದು ಮುಗುಮ್ಮಾಗಿ ಉತ್ತರಿಸಿದರು.
2004ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭಗೊಳ್ಳಲು 3 ವರ್ಷಗಳಿಂದ ಕಾಡಿದ ಬರಗಾಲವೇ ಕಾರಣ. ನನ್ನ ಮೇಲಿರುವ ಆರೋಪಗಳಿಗೆ ಮುಂದಿನ ದಿನಗಳಲ್ಲಿ ಉತ್ತರಿಸುವೆ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನು ಸಂಘಟಿಸುವುದಾಗಿ ಅವರು ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)