ಜನತಾದರ್ಶನ ರಾಜಕೀಯಕ್ಕಾಗಿ ಅಲ್ಲ: ಠಾಕೂರ್
ಬೆಂಗಳೂರು, ಮಾ.1: ರಾಜಕಾರಣಕ್ಕಾಗಿ ಜನತಾದರ್ಶನ ನಡೆಸುತ್ತಿಲ್ಲ. ಜನರ ದುಃಖ-ದುಮ್ಮಾನಗಳನ್ನು ಕೇಳಿ ಅವರ ಸಮಸ್ಯಗಳಿಗೆ ಪರಿಹಾರ ಸೂಚಿಸುವುದೇ ಹೊರತು ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಜನತಾದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ರಾಜ್ಯಪಾಲ ರಾಮೇಶ್ವರ ಠಾಕೂರ್ ಸುದ್ದಿಗಾರರೊಂದಿಗೆ ಹೀಗೆಂದರು.
ಜನತಾದರ್ಶನವನ್ನು ಮಾಡುತ್ತಿರುವುದು ಯಾರನ್ನೂ ಮೆಚ್ಚಿಸುವುದಕ್ಕಾಗಿ ಅಲ್ಲ, ಮೆಚ್ಚಿಸುವ ಅಗತ್ಯವೂ ಇಲ್ಲ. ಜನತಾದರ್ಶನದ ಮೂಲಕ ಬಡಜನರಿಗೆ ಸೇವೆ ಒದಗಿಸುವುದಷ್ಟೇ ನಮ್ಮ ಕೆಲಸ. ಇದು ಸರ್ಕಾರದ ಜಬಾಬ್ದಾರಿ ಹಾಗೂ ಕರ್ತವ್ಯ ಸಹ ಎಂದರು. ದಾನಿಗಳ ನೆರವಿನಿಂದ ರೋಗಿಗಳಿಗೆ ಚಿಕಿತ್ಸೆ ದೊರೆಯುತ್ತದೆ. ದಾನಿಗಳ ಸಹಕಾರ ನೆರವು ಇರುವ ತನಕ ರೋಗಿಗಳ ಸೇವೆ ನಿರಂತರವಾಗಿ ನಡೆಯಲಿದೆ ಎಂದು ಠಾಕೂರ್ ಹೇಳಿದರು.
ರಾಜ್ಯಪಾಲರ ಸಲಹೆಗಾರರಾದ ಪಿ.ಕೆ.ತಾರಕನ್, ಪಿ.ಪಿ.ಪ್ರಭು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೈಯದ್ ಜಮೀರ್ ಪಾಷ ಸೇರಿದಂತೆ ಕಿದ್ವಾಯಿ, ಜಯದೇವ, ನಾರಾಯಣ ಹೃದಯಾಲಯ ಆಸ್ಪತ್ರೆಯ ವೈದ್ಯರು ಜನತಾದರ್ಶನದಲ್ಲಿ ಅರ್ಜಿ ಸ್ವೀಕರಿಸಿದರು. ಕಳೆದ ಬಾರಿಯ ಜನತಾದರ್ಶನಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ಜನರು ಜನತಾದರ್ಶನಕ್ಕೆ ಹಾಜರಾಗಿದ್ದರು.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications