ಮುಂಗಡ ಪತ್ರದ ನಿರೀಕ್ಷೆಯಲ್ಲಿ ಜನಸ್ತೋಮ
ಬೆಂಗಳೂರು, ಫೆ 28 : ಫೆ. 29 ಶುಕ್ರವಾರ ಭಾರತ ಅರ್ಥ ವ್ಯವಸ್ಥೆಯಲ್ಲಿ ಮರುಕಳಿಸಲಿರುವ ಇನ್ನೊಂದು ಮಹತ್ವದ ದಿನ. 2008-09ನೇ ಸಾಲಿನ ದುಡ್ಡು ಕಾಸು, ಆದಾಯ ಖರ್ಚು, ಗಳಿಕೆ ಉಳಿಕೆ, ಸಾಲ ಶೂಲ, ಉತ್ಪಾದನೆ ವ್ಯಾಪಾರ, ವಾಣಿಜ್ಯ ತೆರಿಗೆ, ಒಟ್ಟಾರೆ ದೇಶದ ಸಂಪನ್ಮೂಲ ನಿರ್ವಹಣೆಯ, ಗತಿ ವಿಧಾನಗಳ, ರೂಪರೇಷೆಗಳ ಒಂದು ಸ್ಥೂಲ ನೀಲನಕ್ಷೆ ನಿರ್ಧಾರವಾಗುವ ದಿನ.
ಕಾಂಗ್ರೆಸ್ ಪಕ್ಷದ ಯಜಮಾನಿಕೆಯಲ್ಲಿರುವ ಕೇಂದ್ರದ ಸಮ್ಮಿಶ್ರ ಸರಕಾರದ ಐದನೆಯ ಮತ್ತು ಕೊನೆಯ ಮುಂಗಡ ಪತ್ರ ನಾಳೆ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಅರ್ಥ ಸಚಿವ ಪಳನಿಯಪ್ಪನ್ ಚಿದಂಬರಂ ಎಂದಿನಂತೆ ಮುಂಗಡ ಪತ್ರ ಮಂಡಿಸಲು ಸಿದ್ಧರಾಗುತ್ತಿದ್ದಾರೆ. ಮುಂಗಡ ಪತ್ರದ ಮುಖ್ಯಾಂಶಗಳನ್ನು ದಟ್ಸ್ ಕನ್ನಡ ಮತ್ತು ಒನ್ ಇಂಡಿಯ ಚಾನಲ್ಲಿನಲ್ಲಿ ನೀವು ಕಾಣಬಹುದು.
ಈ ಮುಂಗಡಪತ್ರವು ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರ, ತೆರಿಗೆ ಸುಧಾರಣೆ ಮತ್ತು ಮಿತಿಮೀರಿ ಏರುತ್ತಿರುವ ಆಹಾರ ಪದಾರ್ಥಗಳ ಬೆಲೆಗಳ ಮೇಲೆ ಹತೋಟಿ ಸಾಧಿಸುವತ್ತ ಒತ್ತುಕೊಡಲಿದೆ ಎಂದು ನಿರೀಕ್ಷಿಸಲಾಗಿದೆ. ಎಡಪಂಥದತ್ತ ವಾಲಿಕೊಂಡಿರುವ ಸಮ್ಮಿಶ್ರ ಸರಕಾರದಲ್ಲಿ 2004ರಿಂದ ಸದಸ್ಯರಾಗಿರುವ ಹಣಕಾಸು ಸಚಿವ ಚಿದಂಬರಂ ಅವರು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಬಂಡವಾಳ ಹೂಡಿಕೆ, ಮುಖ್ಯವಾಗಿ ರಸ್ತೆ, ಬಂದರು ಮತ್ತು ವಿದ್ಯುತ್ ವಲಯದ ಸಮರ್ಥ ನಿರ್ವಹಣೆಯ ಮೇಲೆ ಗಮನಹರಿಸಲಿದ್ದಾರೆಂದು ಊಹಿಸಲಾಗಿದೆ. ಮುಂದಿನ ಆರ್ಥಿಕ ವರ್ಷ ಏಪ್ರಿಲ್ 1ರಿಂದ ಮಾರ್ಚ್ 31ರವರೆಗೆ ಇರುವುದು.
ವ್ಯಾಪಾರ ವಹಿವಾಟು ಉತ್ಪಾದನೆಯಲ್ಲಿ ತೊಡಗಿರುವ ವಲಯಗಳು, ಮಾರುಕಟ್ಟೆ, ಸಂಬಳದಾರರು, ಮತ್ತೆಲ್ಲರೂ ಮುಂಗಡಪತ್ರದಲ್ಲಿ ತಮಗೇನು ಲಾಭಸಿಕ್ಕೀತು ಎಂದು ಎದುರು ನೋಡುವುದು ಸಹಜ. ಶ್ರೀಸಾಮಾನ್ಯರು, ನಿತ್ಯೋಪಯೋಗಿ ಪದಾರ್ಥಗಳ ಬೆಲೆ ಏರುವುದೋ ತಗ್ಗುವುದೋ ಎಂಬ ಬಗ್ಗೆ ಕುತೂಹಲಿಗಳಾದರೆ ಸಂಬಳದಾರರು ಮತ್ತು ಖಾಸಗಿ ವಲಯದವರು ತೆರಿಗೆ ಸುಧಾರಣೆ ಪ್ರಕ್ರಿಯೆಯಿಂದ ತಮ್ಮ ಲಾಭ ನಷ್ಟಗಳ ತಕ್ಕಡಿ ಎತ್ತ ತೂಗುವುದು ಎಂದು ಕಾತರರಾಗಿರುತ್ತಾರೆ.
ವಿಶೇಷವಾಗಿ ತಿಂಗಳ ಸಂಬಳದ ಆಧಾರದ ಮೇಲೆ ಸಂಸಾರ ತೂಗಿಸುತ್ತಾ ಆದಾಯ ತೆರಿಗೆಯ ಬಲೆಯಲ್ಲಿ ವಿಲವಿಲ ಒದ್ದಾಡುವ ನೌಕರ ವರ್ಗಗಳು ಆದಾಯ ತೆರಿಗೆಯ standard deduction ಪ್ರಮಾಣದ ಏರಿಳಿತಗಳ ಮೇಲೆ ಕಣ್ಣು ನೆಟ್ಟಿರುತ್ತಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications