ಬಿಹಾರಿಗಳ ವಿರುದ್ಧ ದೇವೇಗೌಡರ ಪ್ರಹಾರ
ಬೆಂಗಳೂರು, ಫೆ.28 : 'ಕನ್ನಡಿಗರ ಬಗ್ಗೆ ಗೌರವ ಇರುವ ಕಾರಣ ಕನ್ನಡಿಗರೊಬ್ಬರನ್ನು ಪ್ರಧಾನಿ ಮಾಡಿದೆ' ಎಂಬ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಹೇಳಿಕೆಗೆ ಮಾಜಿ ಪ್ರಧಾನಿ ದೇವೇಗೌಡ ಕಿಡಿಕಾರಿದ್ದಾರೆ. ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದವರೇ ಬಿಹಾರಿಗಳು ಎಂದು ದೇವೇಗೌಡ ಅವರು ತಿರುಗೇಟು ನೀಡಿದ್ದಾರೆ.
ಮಂಗಳವಾರ ರೈಲ್ವೆ ಬಜೆಟ್ ಮಂಡನೆಯ ವೇಳೆ ಲಾಲೂ ಕನ್ನಡಿಗರೊಬ್ಬರನ್ನು ಪ್ರಧಾನಿ ಮಾಡಿರುವ ಬಗ್ಗೆ ಬಡಾಯಿ ಕೊಚ್ಚಿಕೊಂಡಿದ್ದರು. ಬುಧವಾರ ಬೆಂಗಳೂರಿನ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ತಮ್ಮನ್ನು ಪ್ರಧಾನಿ ಮಾಡಿದ್ದು ಯಾರು ಎಂಬುದು ಗೊತ್ತು. ಇದರಲ್ಲಿ ಲಾಲೂ ಪಾಲು ಎಷ್ಟಿದೆ ಎಂಬುದೂ ಗೊತ್ತು. ಪ್ರಧಾನಿ ಹುದ್ದೆಗೆ ತಂದ ಬಿಹಾರಿಗಳೇ ತಮ್ಮನ್ನು ಆ ಸ್ಥಾನದಿಂದ ಕೆಳಗಿಳಿಸಿದರು ವ್ಯಂಗ್ಯವಾಡಿದರು.
ಈ ಬಾರಿಯ ರೈಲ್ವೆ ಬಜೆಟ್ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಇದನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರ ಗಮನಕ್ಕೆ ತರಲಾಗುವುದು. ಸಂಬಂಧಪಟ್ಟ ಸಚಿವರೊಂದಿಗೂ ಚರ್ಚಿಸಲಾಗುವುದು ಎಂದು ದೇವೇಗೌಡ ಅವರು ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)