ಕರ್ನಾಟಕಕ್ಕೆ ಎಂದಿನಂತೆ ಲಾಲೂಯಿಂದ ರೈಲುಮೋಸ
ಬೆಂಗಳೂರು, ಫೆ.26 : ಕನ್ನಡಿಗರನ್ನು ಮತ್ತೊಮ್ಮೆ ನಿರಾಶೆಗೊಳಿಸುವ ಲಾಲು ಪ್ರಸಾದ್ ಯಾದವ್ ರೈಲು ಬಜೆಟ್ ಹೊರಬಿದ್ದಿದೆ. ಕರ್ನಾಟಕಕ್ಕೆ ರೈಲು ವಿಚಾರದಲ್ಲಿ ನ್ಯಾಯ, ಆದ್ಯತೆ ಸಿಗುವುದಿಲ್ಲ, ಕನ್ನಡಿಗರಿಗೆ ಮೋಸ ಯಾವತ್ತೂ ಕಟ್ಟಿಟ್ಟ ಬುತ್ತಿ ಎಂಬ ಆರೋಪಕ್ಕೆ ಈ ಮುಂಗಡ ಪತ್ರ ಇನ್ನಷ್ಟು ಪುಷ್ಟಿ ಕೊಟ್ಟಿದೆ.
ಅನೇಕಾರು ಭರವಸೆಗಳ ಹಸಿರು ಬಾವುಟ ಹಾರಾಡಿಸಿಕೊಂಡು ಬರುತ್ತಿರುವ ಲಾಲೂ ಕಲ್ಪಿತ ರೈಲು ಬಜೆಟ್ ಕರ್ನಾಟಕ ನಿಲ್ದಾಣದಲ್ಲಿ ಎರಡು ನಿಮಿಷ ನಿಂತು ಮತ್ತೆಲ್ಲಿಗೋ ಹೊರಟಿದೆ. ವಿವರಗಳನ್ನು ಕೆಳಗೆ ಓದುವಿರಂತೆ. ಈ ಮಧ್ಯೆ ಲಾಲೂ ಅವರ ಸತತ ಐದನೇ ಬಜೆಟ್ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ರೂಪಿಸಲಾಗಿದೆಯೇ ವಿನಾ ಕನ್ನಡಿಗ ಮತ್ತು ಕರ್ನಾಟಕದ ಹಿತದೃಷ್ಟಿಯಿಂದಲ್ಲ ಎಂದು ಪರಿಣಿತರು ವ್ಯಾಖ್ಯಾನ ಮಾಡುತ್ತಿದ್ದಾರೆ.
ಈಚೆಗೆ ಕನ್ನಡಿಗರನ್ನು ಲಾಲೂ ಕೊಳಕು ಜನ ಎಂದದ್ದು ಜನ ಮರೆತಿಲ್ಲ. ಅದು ಹಾಗಿರಲಿ, ಕಡೆಯಪಕ್ಷ ರೈಲು ಮಾರ್ಗಗಳ ವಿಚಾರದಲ್ಲಿ ಲಾಲೂ ಕನ್ನಡಿಗರಿಗೆ ಕೈಕೊಡುವುದಿಲ್ಲ ಎಂಬ ನಂಬಿಕೆ ನಂಬಿಕೆಯಾಗಿಯೇ ಉಳಿದಿದೆ. ಆದರೆ ಕಿಲಾಡಿ ಲಾಲೂ "ಕನ್ನಡಿಗರೆಂದರೆ ಪ್ರೀತಿ, ಕರ್ನಾಟಕದ ಮೇಲೆ ಅಭಿಮಾನವಿಲ್ಲದಿದ್ದರೆ ಕನ್ನಡಿಗನೊಬ್ಬನನ್ನು ಪ್ರಧಾನಿಯನ್ನಾಗಿ ಮಾಡುತ್ತಿರಲಿಲ್ಲ" ಎಂಬಂಥಹ ಹೇಳಿಕೆಗಳನ್ನು ಬಜೆಟ್ ಮಂಡನೆ ವೇಳೆಯಲ್ಲಿ ಸಾರಿದ್ದಾರೆ. ರೈಲು ಮುಂಗಡ ಪತ್ರ ಮಂಡಿಸುವಾಗ ಕನ್ನಡಿಗರ ಪ್ರೀತಿ ವಿಶ್ವಾಸವನ್ನು ಪ್ರಮುಖವಾಗಿ ಪ್ರಸ್ತಾಪಿಸಿ ತಮ್ಮನ್ನು ತಾವೇ ಸಮರ್ಥಿಸಿಕೊಂಡಿದ್ದಾರೆ.
ಯುಪಿಎ ಸರಕಾರದ ಪಾಲುದಾರರೂ, ಸೋನಿಯಾ ಗಾಂಧೀ ಶಿಷ್ಯಪರಂಪರೆಗೆ ಸೇರಿದವರೂ ಆದ ಮಲ್ಲಿಕಾರ್ಜುನ ಖರ್ಗೆ, ತೇಜಸ್ವಿನಿ ರಮೇಶ್, ಇದೀಗ ಸೇರ್ಪಡೆಯಾಗಿರುವ ಎಂ.ಪಿ.ಪ್ರಕಾಶ್ ಕೂಡ ಬಜೆಟ್ ನಿರಾಶಾದಾಯಕವಾಗಿದೆ ಎಂದು ಹೇಳಿದ್ದಾರೆ. ಕರ್ನಾಟಕಕ್ಕೆ ಹೆಚ್ಚಿನ ಸೌಲಭ್ಯವನ್ನು ಒದಗಿಸಿದ ಬಜೆಟ್ಟನ್ನು ವಿರೋಧಿಸಿ ರಾಜ್ಯ ಸಂಸದರು ಲೋಕಸಭೆಯಲ್ಲಿ ವಾಕೌಟ್ ಕೂಡ ಮಾಡಿದ್ದಾರೆ.
ರೈಲನ್ನು ಹಸುವಿಗೆ ಹೋಲಿಸಿರುವ ಲಾಲೂ ಹಣಹೂಡಿ ಲಾಭದ ಪ್ರತಿಫಲ (ಮೇವು ಹಾಕಿ ಹಾಲು ಪಡೆಯುವ) ಪಡೆಯಲು ಅನೇಕ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಲಾಲೂ ರೈಲು ಸಚಿವರಾದಂದಿನಿಂದಲೂ ಉತ್ತಮವಾಗಿ ನಡೆಯುತ್ತಿರುವ ರೈಲು ಇಲಾಖೆ ಲಾಭದತ್ತ ಸಾಗಿದೆ. ಅದನ್ನೇ ಗಮನದಲ್ಲಿಟ್ಟಿರುವ ಲಾಲೂ ಲಾಭಕ್ಕಾಗಿ ಏನೆಲ್ಲ ಬೇಕೋ ಅದನ್ನೆಲ್ಲ ಮಾಡಿದ್ದಾರೆ. ಕೆಲವು ಎಸಿ ಪ್ರಯಾಣದಲ್ಲಿ ಹಾಗೂ ಎರಡನೇ ದರ್ಜೆ ರೈಲು ಪ್ರಯಾಣದ ಬೆಲೆಗಳಲ್ಲಿ ಕಡಿತ, ಹಿರಿಯರಿಗೆ ನಾಗರಿಕರಿಗೆ ಪ್ರತ್ಯೇಕ ಬೋಗಿ, ತಾಯಂದಿರಿಗೆ ಹೆಚ್ಚಿನ ಸೌಲಭ್ಯ ಹೊರತುಪಡಿಸಿದರೆ ಸಾಮಾನ್ಯ ಜನತೆಗೆ ಹೆಚ್ಚಿನ ಲಾಭವಾದಂತಿಲ್ಲ.
ಲಾಲೂ ಬಿಟ್ಟ ಭರವಸೆಯ ರೈಲು
* ಹುಬ್ಬಳ್ಳಿ ರೈಲ್ವೆ ಆಸ್ಪತ್ರೆ ಮೇಲ್ದರ್ಜಗೆ ಏರಿಕೆ
* ಹಾಸನ-ಮುಂಬೈ ರೈಲು ಮಾರ್ಗ
* ಬೆಂಗಳೂರು-ಚೆನ್ನೈಗೆ ಹೊಸ ರೈಲು
* ಬೆಂಗಳೂರು-ಕೊಯಮತ್ತೂರು ರೈಲು ಎರ್ನಾಕುಲಂತನಕ ವಿಸ್ತರಣೆ
* ಬೆಂಗಳೂರು-ಚೆನ್ನೈ-ಪುಟ್ಟಪರ್ತಿವರೆಗೆ ರೈಲು
* ಬೆಂಗಳೂರು-ಕೂಜ್ವೇಲಿಗೆ ಗರೀಬ್ ರಥ
* ಸೋಲಾಪುರ ಬಾಗಲಕೋಟೆ ರೈಲು ಗದಗವರೆಗೆ ವಿಸ್ತರಣೆ
* ಹರಿಹರ-ಹರಪನಹಳ್ಳಿ ರೈಲು ಮಾರ್ಗ ಪೂರ್ಣ
* ಶಿವಮೊಗ್ಗ-ತಾಳಗುಪ್ಪ-ಆನಂದಪುರ ಗೇಜ್ ಪರಿವರ್ತನೆಗೆ ಅಸ್ತು
* ಬಾಗಲಕೋಟೆ-ಜಸ್ವಂತಪುರಕ್ಕೆ ಪ್ರತಿದಿನ ರೈಲು ಪ್ರಯಾಣ
ಕರ್ನಾಟಕದ ನಿರಾಶೆಗಳು
* ಹುಬ್ಭಳ್ಳಿಯಿಂದ ಮುಂಬೈವರೆಗೆ ಹೊಸ ರೈಲು ಬೇಕೆಂಬ ಬೇಡಿಕೆ ಮೊದಲಿನಿಂದಲೂ ಇದೆ ಅದು ಈಡೇರಿಲ್ಲ.
* ಬೆಂಗಳೂರಿನಿಂದ ತಿರುಪತಿಗೆ ಹಗಲುಹೊತ್ತಿನಲ್ಲಿ ರೈಲು ಬೇಕೆಂಬ ನಿರೀಕ್ಷೆಯೂ ಹುಸಿಯಾಗಿದೆ.
* ಜನರ ಓಡಾಟ ವಿಪರೀತವಾಗಿರುವ ಬೆಂಗಳೂರು ಮೈಸೂರು ನಡುವೆ ಹೆಚ್ಚಿನ ರೈಲು ಸಿಕ್ಕಿಲ್ಲ.
* ಧಾರವಾಡ-ಬೈಲಹೊಂಗಲ, ತುಮಕೂರು-ದಾವಣಗೆರೆ, ಶಹಾಬಾದ್-ಕುಡುಚಿ, ತಾಳಗುಪ್ಪ-ಹೊನ್ನಾವರ ಮತ್ತು ಚಾಮರಾಜನಗರ-ಕನಕಪುರ-ಬೆಂಗಳೂರಿನ ಹೊಸ ಮಾರ್ಗಗಳ ನಿರೀಕ್ಷೆ ಹುಸಿಯಾಗಿದೆ.
* ಸಕಲೇಶಪುರದಿಂದ ಮಂಗಳೂರಿನವರೆಗೆ ಸಾರ್ವಜನಿಕರಿಗೆ ಅನುಕೂಲವಾಗುವ ರೈಲು ಮಾರ್ಗಕ್ಕೆ ಹಸಿರುನಿಶಾನೆ ಸಿಕ್ಕಿಲ್ಲ.
* ಚೆನ್ನೈನಿಂದ ಬೆಂಗಳೂರು-ಹುಬ್ಬಳ್ಳಿ ಮಾರ್ಗವಾಗಿ ಮುಂಬೈವರೆಗಿನ ರೈಲಿನ ಕನಸು ಕನಸಾಗಿಯೇ ಉಳಿದಿದೆ.
(ದಟ್ಸ್ಕನ್ನಡ ವಾರ್ತೆ)
ಪೂರಕ ಓದಿಗೆ:
ಕೇಂದ್ರ ರೈಲ್ವೆ ಬಜೆಟ್-08,ಪ್ಲಾಟ್ ಫಾರಂ ನ್ಯೂಸ್
ರೈಲು ಪೂಜನೀಯ ಹಸುವಿದ್ದಂತೆ, ಲಾಲೂ ಬಣ್ಣನೆ
ರೈಲ್ವೆ ಬಜೆಟ್-08: ಫಲಿಸೀತೆ ಕರ್ನಾಟಕದ ನಿರೀಕ್ಷೆ?
ಸಾಮಾನ್ಯ ಜನತೆಗೆ ಹೊರೆಯಾಗದಂತೆ ಬಜೆಟ್: ಮುನ್ಷಿ












Click it and Unblock the Notifications