ರೈಲು ಪೂಜನೀಯ ಹಸುವಿದ್ದಂತೆ, ಲಾಲೂ ಬಣ್ಣನೆ
ನವದೆಹಲಿ, ಫೆ. 26 : ರೈತರ ಆತ್ಮಹತ್ಯೆಗಳಿಗೆ ಸಂಬಂಧಿಸಿದಂತೆ ವಿರೋಧಪಕ್ಷಗಳು ಕೋಲಾಹಲವೆಬ್ಬಿಸಿದ್ದರಿಂದ ಲಾಲೂ ಪ್ರಸಾದ್ ಯಾದವ್ ಅವರ 2008-09 ಸಾಲಿನ ರೈಲು ಬಜೆಟ್ ಮದ್ಯಾಹ್ನ 12ಕ್ಕೆ ತಡವಾಗಿ ಆರಂಭವಾಗಿದೆ.
ಯುಪಿಎ ಸರ್ಕಾರದಲ್ಲಿ ಸತತ ಐದನೇ ವರ್ಷ ರೈಲು ಬಜೆಟ್ ಮಂಡಿಸುತ್ತಿರುವ ರೈಲು ಸಚಿವ ಲಾಲೂ ಪ್ರಸಾದ್ ಯಾದವ್ ರೈಲನ್ನು ಕಾಮಧೇನುವಿದ್ದಂತೆ ಎಂದು ಬಣ್ಣಿಸಿ ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದರು.
ರೈಲು ಕೂಡ ಹಸುವಿದ್ದಂತೆ, ಅದನ್ನು ಪೂಜಿಸಬೇಕು, ಮೇವುಣಿಸಬೇಕು, ಆಗಲೇ ಅದು ಸರಿಯಾದ ಪ್ರತಿಫಲ ನೀಡುತ್ತದೆ. ಹಾಗೆಯೇ ರೈಲುಗಳ ಉದ್ಧಾರವಾದರೆ ಪ್ರತಿಫಲವನ್ನು ತಾನಾಗಿಯೇ ನೀಡುತ್ತದೆ ಎಂದು ಹೇಳಿದರು.
ಕರ್ನಾಟಕದಲ್ಲಿ ರೈಲ್ವೆ ಇಲಾಖೆಗೆ ಬಿಹಾರಿಗಳನ್ನು ನೇಮಿಸುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಭಾರೀ ಪ್ರತಿಭಟನೆ ಎದುರಿಸಿದ್ದ ಲಾಲೂ ಕರ್ನಾಟಕಕ್ಕೆ ಯಾವ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತಾರೆಂಬುದು ಇಂದು ತಿಳಿಯಲಿದೆ. ರೈಲು ಬಜೆಟ್ ಮಂಡಿಸುವ ಮೊದಲು ಕನ್ನಡಿಗರನ್ನು ನಿಂದಿಸಿಲ್ಲವೆಂದು ಮತ್ತೆ ಒತ್ತಿಹೇಳಿದ್ದಾರೆ.
(ದಟ್ಸ್ಕನ್ನಡ ವಾರ್ತೆ)