ರೈಲ್ವೆ ಬಜೆಟ್-08: ಈಡೇರುವುದೇ ರಾಜ್ಯದ ನಿರೀಕ್ಷೆಗಳು
ನವದೆಹಲಿ, ಫೆ.26: ನಷ್ಟದಲ್ಲಿ ಸಾಗುತ್ತಿದ್ದ ರೈಲ್ವೆ ಇಲಾಖೆಯನ್ನು ಲಾಭದ ಹಳಿಗೆ ತಂದು ಕೂರಿಸಿದ ಲಾಲೂ ಪ್ರಸಾದ್ ಯಾದವ್ ಮಂಗಳವಾರ (ಫೆ.26) 12 ಗಂಟೆಗೆ ಲೋಕಸಭೆಯಲ್ಲಿ ರೈಲ್ವೆ ಬಜೆಟ್ ಮಂಡಿಸಲಿದ್ದಾರೆ. ಲಾಲೂ ಅಧಿಕಾರಾವಧಿಯಲ್ಲಿ ಮಂಡಿಸುತ್ತಿರುವ ಐದನೆಯ ಹಾಗೂ ಕಡೆಯ ಬಜೆಟ್ ಇದು.
ಕರ್ನಾಟಕದ ನಿರೀಕ್ಷೆ:
ಧಾರವಾಡ-ಬೈಲಹೊಂಗಲ, ತುಮಕೂರು-ದಾವಣಗೆರೆ, ಶಹಾಬಾದ್-ಕುಡುಚಿ, ತಾಳಗುಪ್ಪ-ಹೊನ್ನಾವರ ಮತ್ತು ಚಾಮರಾಜನಗರ-ಕನಕಪುರ-ಬೆಂಗಳೂರಿನ ಹೊಸ ಮಾರ್ಗಗಳಿಗೆ ಲಾಲೂ ಚಾಲನೆ ನೀಡುವ ನಿರೀಕ್ಷೆ ಇದೆ.
ತಾಳಗುಪ್ಪ-ಹೊನ್ನಾವರ ಹೊಸ ಮಾರ್ಗಕ್ಕೆ ಅನುಮತಿ ನೀಡಿದರೆ ಯೋಜನಾ ವೆಚ್ಚವನ್ನು ಹಂಚಿಕೊಳ್ಳಲು ಸಿದ್ಧ ಎಂದು ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಗದಗ-ಹಾವೇರಿ, ಹೊಳೆನರಸೀಪುರ-ಕುಶಾಲನಗರ, ಶಿವಮೊಗ್ಗ-ಹರಿಹರ ಹೊಸ ರೈಲ್ವೆ ಮಾರ್ಗಗಳಿಗಾಗಿ ರಾಜ್ಯ ಸರ್ಕಾರ ರೈಲ್ವೆ ಇಲಾಖೆಯ ಮೇಲೆ ಕಳೆದ ಎರಡು ವರ್ಷಗಳಿಂದ ಒತ್ತಡ ಹೇರುತ್ತಿದೆ.
ಒಂದು ವೇಳೆ ಹೊಸ ಮಾರ್ಗಗಳ ಬೇಡಿಕೆ ಈಡೇರಿದರೆ, ಬೆಳಗಾವಿ ಮತ್ತು ಗುಲ್ಬರ್ಗ ಜಿಲ್ಲೆಗಳಿಗೆ ಸಂಪರ್ಕ ಕೊಡುವ ಶಹಾಬಾದ್-ಕುಡುಚಿ ರೈಲು ಮಾರ್ಗ ಆ ಕ್ಷೇತ್ರದ ಆರ್ಥಿಕ ಪ್ರಗತಿಗೆ ನೆರವಾಗಲಿದೆ. ತುಮಕೂರು-ದಾವಣಗೆರೆ, ಧಾರವಾಡ-ಬೈಲಹೊಂಗಲ-ಬೆಳಗಾವಿ ಮಾರ್ಗಗಳಿಂದ ಪ್ರಯಾಣದ ಅವಧಿ ಕಡಿಮೆಯಾಗಲಿದೆ.
ಈ ಬಾರಿಯ ರೈಲ್ವೆ ಬಜೆಟ್ ಸಾಮಾನ್ಯ ಜನರಿಗೆ ಹೊರೆಯಾಗದಂತೆ ರೂಪಿಸಿದ್ದೇವೆ ಎಂದು ಲಾಲೂ ಈಗಾಗಲೇ ಹೇಳಿದ್ದಾರೆ. ಒಂದು ವೇಳೆ ಇದು ಜನಪರ ಬಜೆಟ್ ಆದರೆ, ಸತತ ಐದನೇ ವರ್ಷ ಪ್ರಯಾಣ ದರವನ್ನು ಹೆಚ್ಚಿಸದ ಕೀರ್ತಿ ಲಾಲೂ ಮುಡಿಗೆ ಏರಲಿದೆ. ಲಾಭದಲ್ಲಿರುವ ರೈಲ್ವೆ ಇಲಾಖೆ ಪ್ರಯಾಣ ದರವನ್ನು ಶೇ.3ರಿಂದ 5ರಷ್ಟು ಕಡಿಮೆ ಮಾಡುವ ಸಂಭವವಿದೆ. ವೃದ್ಧರು, ಮಹಿಳೆಯರು, ಕ್ರೀಡಾಪಟುಗಳು, ವಿದ್ಯಾರ್ಥಿಗಳು, ರೈಲ್ವೆ ಕೂಲಿಗಳಿಗೆ ಕೆಲವು ರಿಯಾಯಿತಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಏಡ್ಸ ರೋಗಿಗಳಿಗೆ ರಿಯಾಯಿತಿ ಮತ್ತು ನಿಲ್ದಾಣಗಳಲ್ಲಿ ಚಿಕಿತ್ಸಾ ಕೇಂದ್ರಗಳನ್ನು ತೆರೆಯುವ ಯೋಜನೆಯೂ ಲಾಲೂ ಬಜೆಟ್ನಲ್ಲಿದೆ.
(ಏಜೆನ್ಸೀಸ್)












Click it and Unblock the Notifications