ನವಚೈತನ್ಯ ಸಮಾವೇಶದಲ್ಲಿ ಸಿದ್ದು-ಮಹದೇವು ಜಂಗಿಕುಸ್ತಿ
ಮೈಸೂರು, ಡಿ.24 : ಯುವ ಕಾಂಗ್ರೆಸ್ ಭಾನುವಾರ (ಡಿ.23) ಆಯೋಜಿಸಿದ್ದ 'ನವ ಚೈತನ್ಯ ಸಮಾವೇಶ'ದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಮಾಜಿ ಸಚಿವ ಎಂ. ಮಹಾದೇವು ಮತ್ತವರ ಬೆಂಬಲಿಗರ ನಡುವೆ ಜಟಾಪಟಿ, ಅವ್ಯಾಚ ಶಬ್ದಗಳು ಪರಸ್ಪರ ವಿನಿಮಯವಾಗಿವೆ.
ತೀಕ್ಷ್ಣ ಮಾತುಗಳಿಂದ ಆಕ್ರೋಶಗೊಂಡಿದ್ದ ಸಿದ್ದರಾಮಯ್ಯ ಮಾಜಿ ಮೇಯರ್ ವಾಸು ಸೇರಿದಂತೆ ಒಂದಿಬ್ಬರನ್ನು ಹಿಂದಕ್ಕೆ ತಳ್ಳಿ ಮಹಾದೇವು ಮೇಲೆ ಪಂಚ್ ಮಾಡಿದರು. ಆ ಕೂಡಲೇ ಕಾರ್ಯಕರ್ತರು ಮಧ್ಯಪ್ರವೇಶಿಸಿ ಸಮಾಧಾನ ಪಡಿಸಿದರು. ಘಟನೆಯಿಂದ ಗಲಿಬಿಲಿಗೊಂಡ ಮಹಾದೇವು ಆಗಬಹುದಾಗಿದ್ದ ಅನಾಹುತದಿಂದ ಪಾರಾದರು. ಗದ್ದಲದಲ್ಲಿ ಒಂದಿಬ್ಬರು ಕಾರ್ಯಕರ್ತರಿಗೂ ಗಾಯಗಳಾಗಿವೆ.
ಈ ಘಟನೆಯಿಂದ ಮೂಲ ಕಾಂಗ್ರೆಸ್ ಮತ್ತು ವಲಸೆ ಕಾಂಗ್ರೆಸ್ಸಿಗರ ನಡುವಿನ ಮೈಸೂರು ಭಾಗದಲ್ಲಿ ಭಿನ್ನಮತ ಸ್ಫೋಟಗೊಂಡಂತಾಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಕೃಷ್ಣ ಬೈರೇಗೌಡರಿಗೆ ನಾಯಕರ ಜಟಾಪಟಿ ಸ್ವಾಗತ ಕೋರುವಂತಿತ್ತು. ಅವರು ಹಿರಿಯ ನಾಯಕರ ಮಾರಾಮಾರಿಯನ್ನು ಮೂಕಪ್ರೇಕ್ಷಕರಂತೆ ನೋಡಬೇಕಾಯಿತು.
ಜಟಾಪಟಿಗೆ ಹೇಗಾಯಿತು?
ಸಮಾವೇಶ ಆರಂಭಗೊಂಡ ಅರ್ಧ ಗಂಟೆಯ ಬಳಿಕ ಮಹಾದೇವು ವೇದಿಕೆಗೆ ಆಗಮಿಸಿದರು. ವಿಧಾನ ಪರಿಷತ್ ಸದಸ್ಯ ಟಿ.ಎನ್. ಮಂಜುನಾಥ್ ಮಾತನಾಡುತ್ತಿದ್ದರು. ಬಳಿಕ ಮಹಾದೇವು ಮಾತು ಆರಂಭಿಸಬೇಕು ಎನ್ನುವಾಗ ಸಿದ್ಧರಾಮಯ್ಯ ಅವರ ಆಗಮನವಾಯಿತು. ಜೈಕಾರಗಳ ನಡುವೆ ಸಿದ್ಧು ವೇದಿಕೆ ಏರಿದರು. ಮಹಾದೇವು ವಲಸೆ ಕಾಂಗ್ರೆಸಿಗರ ವಿರುದ್ದ ಹರಿಹಾಯ್ದರು.
ಈಗ ಕಾಂಗ್ರೆಸ್ಗೆ ವಲಸೆ ಬಂದವರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿ ಎನ್ನುತ್ತಿದ್ದಾರೆ. ನಿಷ್ಠಾವಂತರನ್ನು ಕಡೆಗಣಿಸಲಾಗಿದೆ. ನಾವು ಅಸ್ಪೃಶ್ಯರಾಗಿದ್ದೇವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಇವನ್ನೆಲ್ಲಾ ಸಿದ್ದು ತಲೆತಗ್ಗಿಸಿಕೊಂಡು ಆಲಿಸುತ್ತಿದ್ದರು. ಇದೇ ವೇಳೆಗೆ ಮಾಜಿ ಮೇಯರ್ ಅನಂತ್, ನಿಮಗೆ ಯಾರ ಬಗ್ಗೆಯಾದರೂ ಅಸಮಾಧಾನವಿದ್ದರೆ ನೇರವಾಗಿ ಹೇಳಿ ಎಂದು ಕೂಗಿದರು. ಆಗ 50ಕ್ಕೂ ಹೆಚ್ಚು ಸಿದ್ಧು ಬೆಂಬಲಿಗರು ವೇದಿಕೆಗೆ ಏರಿ ಮಹಾದೇವು ಕಡೆ ನುಗ್ಗಿದ್ದರಿಂದ ಗದ್ದಲ ಜೋರಾಯಿತು. ವೇದಿಕೆಯ ಮೇಲೆ ಮಹಾದೇವು ಬೆಂಬಲಿಗರು, ಮಾಜಿ ಮೇಯರ್ ವಾಸು ಬೆಂಬಲಿಗರು ಒಟ್ಟಾಗಿ ಗದ್ದಲ ಮತ್ತಷ್ಟು ಹೆಚ್ಚಾಯಿತು.
ಘಟನೆಯಿಂದ ಕೋಪಗೊಂಡ ಸಿದ್ಧು ಮಹಾದೇವು ಕಡೆ ಮುನ್ನುಗ್ಗಿ, ಅಡ್ಡ ಬಂದ ವಾಸು ಅವರನ್ನು ಪಕ್ಕಕ್ಕೆ ದೂಡಿದರು. ಮಾಹಾದೇವು ಅವರನ್ನು 'ಏಯ್ ಏನ್ ಮಾಡ್ತೀಯಾ' ಎಂದು ಮುಖಕ್ಕೆ ಪಂಚ್ ಕೊಟ್ಟರು. ಇದರಿಂದ ಭೀತಿಗೊಂಡ ಮಹಾದೇವು ಕೆಳಗೆ ಬೀಳಲಿದ್ದರು, ಬೆಂಬಲಿಗರು ಅವರನ್ನು ಬೇರೆಡೆಗೆ ಕರೆದೊಯ್ದರು.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications