ಗುಜರಾತ್ ಫಲಿತಾಂಶ : ಅವರವರ ಮೂಗಿನ ನೇರಕ್ಕೆ!
ಬೆಂಗಳೂರು, ಡಿ.24 : ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಹ್ಯಾಟ್ರಿಕ್ ಸಾಧಿಸಿರುವುದು ರಾಜ್ಯ ರಾಜಕೀಯ ವಲಯಗಳಲ್ಲಿ ಪ್ರತಿಧ್ವನಿಸಿದೆ. ಗುಜರಾತ್ ಚುನಾವಣಾ ಫಲಿತಾಂಶ ಕುರಿತು ಯಾರ್ಯಾರು ಏನೇನು ಹೇಳುತ್ತಾರೆ?
ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಇಂದು ಗುಜರಾತ್, ನಾಳೆ ಕರ್ನಾಟಕ, ನಂತರ ಭಾರತ. ಎಲ್ಲೆಲ್ಲೂ ಭಾರತೀಯ ಜನತಾ ಪಕ್ಷ ತನ್ನ ಆಧಿಪತ್ಯ ಸ್ಥಾಸಿಸಲಿದೆ. ಗುಜರಾತ್ ಫಲಿತಾಂಶದಿಂದ ರಾಜ್ಯ ಬಿಜೆಪ್ಗೆ ಇನ್ನೂ ಹೆಚ್ಚು ಶಕ್ತಿ, ಚೈತನ್ಯ ಬರಲಿದೆ. ಆಡ್ವಾಣಿ ನೇತೃತ್ವದಲ್ಲಿ ಸರಕಾರ ರಚಿಸಲು ಜನ ಬೆಂಬಲ ದೊರೆಯಲಿದೆ. ಸೋನಿಯಾ ಹಾಗೂ ರಾಹುಲ್ರ ಪ್ರಯತ್ನ ಫಲಿಸಲಿಲ್ಲ. ಅಲ್ಪ ಸಂಖ್ಯಾತರ ಹೆಸರಲ್ಲಿ ಜನರ ಭಾವನೆ ಕೆರಳಿಸಲು ಮುಂದಾದ ಕಾಂಗ್ರೆಸ್ ಧುರೀಣರ ಬೇಳೆ ಬೇಯಲಿಲ್ಲ.
ಸಿದ್ಧರಾಮಯ್ಯ, ಮಾಜಿ ಉಪಮುಖ್ಯಮಂತ್ರಿ
ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ಸಮಬಲ ಹೋರಾಟವಿತ್ತು. ಮೋದಿ ಭಯ ಹುಟ್ಟಿಸಿ ಮತದಾರರನ್ನು ಸೆಳೆದಿದ್ದಾರೆ ಎಂಬ ಸುದ್ದಿ ಇದೆ. ಗುಜರಾತ್ ಫಲಿತಾಂಶ ಬೇರೆ ರಾಜ್ಯಗಳ ಫಲಿತಾಂಶಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ
ರಾಜ್ಯ ವಿಧಾನಸಭಾ ಫಲಿತಾಂಶದ ಮೇಲೆ ಗುಜರಾತ್ ಚುನಾವಣೆ ಫಲಿತಾಂಶ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ. ಗುಜರಾತ್ ಪರಿಸ್ಥಿತಿ ರಾಜ್ಯದಲ್ಲಿಲ್ಲ. ಇಲ್ಲಿನ ಚುನಾವಣೆ ವಿಷಯವೇ ಬೇರೆ ಅಲ್ಲಿನ ವಿಷಯವೇ ಬೇರೆ.
ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷರು
ಕರ್ನಾಟಕ ಸೇರಿದಂತೆ ಮುಂದಿನ ಚುನಾವಣೆಗೆ ಇದು ದಿಕ್ಸೂಚಿಯಾಗಿದೆ. ಬಿಜೆಪಿ ಅಲೆ ಎಲ್ಲಡೆ ಏಳಲಿದೆ. ಅಭಿವೃದ್ಧಿಪರ ಆಡಳಿತಕ್ಕೆ ಸಂದ ಜಯ.
ಧರಂ ಸಿಂಗ್, ಮಾಜಿ ಮುಖ್ಯಮಂತ್ರಿ
ಅಲ್ಪಸ್ವಲ್ಪ ಕೆಲಸ ಮಾಡಿ ನರೇಂದ್ರ ಮೋದಿ ಜಯ ಸಾಧಿಸಿದ್ದಾರೆ. ಅಕಕ್ಕೆ ಜನ ಅವರನ್ನು ಬೆಂಬಲಿಸಿದ್ದಾರೆ. ಗುಜರಾತಲ್ಲಿ ಕಾಂಗ್ರೆಸ್ ಪಕ್ಷ ಕುಸಿತ ಕಂಡಿಲ್ಲ. ನಾವೂ ಚೇತರಿಕೆಯ ಹಾದಿಯಲ್ಲಿದ್ದೇವೆ.
ರಮೇಶ್ ಕುಮಾರ್, ಮಾಜಿ ಶಾಸಕ
ವಿಜಯ ಸಾಧಿಸಲು ಪ್ರಯತ್ನ ಮಾಡಿದೆವು ಸಾಧ್ಯವಾಗಲಿಲ್ಲ. ಸೋಲಿಗೆ ಕಾರಣವೇನೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನತೆಯ ತೀರ್ಪನ್ನು ಒಪ್ಪಲೇ ಬೇಕು.
ಆರ್. ಅಶೋಕ್, ಮಾಜಿ ಸಚಿವ
ಸೊನಿಯಾರ ರೋಡ್ ಶೋಗೆ ಗುಜರಾತ್ ಜನತೆ ಮರುಳಾಗಲಿಲ್ಲ. ಸೋನಿಯಾ ವರ್ಚಸ್ಸು ಏನೆಂಬುದು ಪ್ರಪಂಚಕ್ಕೇ ಗೊತ್ತಾಗಿದೆ. ಇದರಿಂದ ಬಿಜೆಪಿಗೆ ಮತ್ತೊಂದು ಅವಕಾಶ ದೊರೆತಂತಾಗಿದೆ.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications