ವೋಕ್ಹಾರ್ಟಲ್ಲಿ ಚೇತರಿಸಿಕೊಳ್ಳುತ್ತಿರುವ ಕುಮಾರಸ್ವಾಮಿ
ಬೆಂಗಳೂರು, ಡಿ.21 : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಕ್ತ ಹರಿವನ್ನು ಅಡ್ಡಗಟ್ಟಿದ್ದ ಕ್ಯಾಲ್ಸಿಫಿಕ್ ಅಯೋರ್ಟಾ ವಾಲ್ವ್ ಬದಲಾವಣೆಗಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಗುರುವಾರ(ಡಿ.20) ಒಳಗಾಗಿದ್ದರು. ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ. ವಿವೇಕ್ ಜವಳಿ ತಿಳಿಸಿದ್ದಾರೆ.
ಕುಮಾರಸ್ವಾಮಿ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಎಲ್ಲಾ ವಿಧಗಳಲ್ಲೂ ಅವರು ಸಹಜ ಸ್ಥಿತಿಗೆ ಮರಳಿದ್ದಾರೆ. ಅವರು ರಾತ್ರಿ ಊಟವನ್ನು ಮಾಡಿ ಕುಟುಂಬದ ಸದಸ್ಯರೆಲ್ಲರನ್ನೂ ಮಾತನಾಡಿಸಿದರು. ಈಗ ಗೆಲುವಾಗಿದ್ದಾರೆ. ಅವರನ್ನು ತೀರ್ವ ನಿಗಾ ಘಟಕದಲ್ಲಿ ಇನ್ನೂ ಒಂದು ದಿನ ಇಡಲಾಗುವುದು. ವಾರದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಡಾ. ಜವಳಿ ತಿಳಿಸಿದರು.
ಕುಮಾರಸ್ವಾಮಿಯವರಿಗೆ ಹಠಾತ್ ಹೃದಯನೋವು ಕಾಣಿಸಿಕೊಂಡ ಕಾರಣ ಅವರನ್ನು ಸೋಮವಾರ ವೋಕ್ಹಾರ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ನಡೆಸಿದ ಆಂಜಿಯೋಗ್ರಾಮ್ ನಂತರ ಅವರಿಗೆ ಕ್ಯಾಲ್ಸಿಫಿಕ್ ಅಯೋರ್ಟಾ ವಾಲ್ವ್ ಸ್ಟೆನೋಸಿಸ್ನಿಂದ ಬಳಲುತ್ತಿರುವುದು ಬೆಳಕಿಗೆ ಬಂದಿತ್ತು. ದೇಹದ ಎಲ್ಲ ಭಾಗಗಳಿಗೆ ಅಯೋರ್ಟಾ ಮೂಲಕವೇ ರಕ್ತ ತಲುಪುತ್ತದೆ. ಅಯೋರ್ಟಾ ಚಿಕ್ಕದಾಗಿದ್ದರಿಂದ ರಕ್ತದ ಹರಿವು ತಾನಾಗೇ ಕುಗ್ಗುತ್ತದೆ. ಅವರಿಗೆ ತೆರೆದ ಹೃದಯ ಚಿಕಿತ್ಸೆ ಅನಿವಾರ್ಯವಾಗಿತ್ತು.
(ದಟ್ಸ್ಕನ್ನಡ ವಾರ್ತೆ)