ವೈಕುಂಠ ದ್ವಾರ ತೆರೆದಿದೆ; ದುಡ್ಡು ಕೊಟ್ಟವರಿಗೆ ಮಾತ್ರ ಪ್ರವೇಶ!
ಬೆಂಗಳೂರು, ಡಿ.19 : ಇಂದು ವೈಕುಂಠ ಏಕಾದಶಿ. ವೈಕುಂಠದ ಬಾಗಿಲು ಇಂದು ಸದಾ ತೆರೆದೇ ಇರುತ್ತದೆ. ಈ ದಿನ ಹುಟ್ಟುವುದು ಅಥವಾ ಸಾಯುವುದು ಪುಣ್ಯ ಎಂಬುದು ವಿಷ್ಣು ಭಕ್ತರ ನಂಬಿಕೆ. ಈ ನಂಬಿಕೆಯೇ ಕೆಲವರ ಪಾಲಿಗೆ ಹೊಟ್ಟೆಪಾಡಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ವಿಷ್ಣು ದೇವಸ್ಥಾನಗಳಲ್ಲಿ ವಿಶೇಷ ಪೂಜೆ,ಪುನಸ್ಕಾರಗಳು ಆರಂಭಗೊಂಡಿವೆ. ಭಕ್ತರು ವಿಷ್ಣುವಿನ ದರ್ಶನಕ್ಕಾಗಿ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಈ ದಿನ ವಿಷ್ಣುವನ್ನು ದರ್ಶಿಸಿದರೆ ಮುಕ್ತಿ ಸಿಗುತ್ತದೆ ಎಂಬ ವಿಶ್ವಾಸದಿಂದ ಭಕ್ತರ ಉತ್ಸಾಹ ಹೆಚ್ಚಾಗಿದೆ.
ಹಗಲು ದರೋಡೆ : ಇಸ್ಕಾನ್, ಬನಶಂಕರಿಯ ದೇವಗಿರಿ ದೇವಸ್ಥಾನ, ಕೋಟೆ ವೆಂಕಟರಮಣ ದೇವಸ್ಥಾನ ಮತ್ತಿತರ ಕಡೆ ಬೆಳಗ್ಗೆ 5ರಿಂದ ಮಧ್ಯರಾತ್ರಿ 12ರ ತನಕ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಷ್ಣು ದೇವಸ್ಥಾನಗಳಲ್ಲಿ ವೈಕುಂಠ ದ್ವಾರ, ವಿಶ್ವರೂಪ ದರ್ಶನ ಮತ್ತಿತರ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸಾದ ಮತ್ತು ಪ್ರವೇಶ ಶುಲ್ಕದ ನೆಪದಲ್ಲಿ ದೇವಸ್ಥಾನದ ಆಡಳಿತ ಮಂಡಳಿಗಳು ಹಣ ಕೀಳುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
(ದಟ್ಸ್ ಕನ್ನಡ ವಾರ್ತೆ)