ಮುಳಬಾಗಿಲದಲ್ಲಿ ಭಾರೀ ಮಳೆ, ಬೆಂಗಳೂರಿನಲ್ಲಿ ಮತ್ತೆ ಪ್ರತ್ಯಕ್ಷ
ಬೆಂಗಳೂರು : ಬೆಳಿಗ್ಗೆಯಿಂದ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದ ಸೂರ್ಯನನ್ನು ಸಾಯಂಕಾಲದ ಹೊತ್ತಿಗೆ ಸಂಪೂರ್ಣವಾಗಿ ಮುಳುಗಿಸಿದ ಮೋಡಗಳು ಧೋಧೋ ಮಳೆ ಸುರಿಸಿವೆ. ಸಾಯಂಕಾಲ 5 ಗಂಟೆಗೆ ಪ್ರಾರಂಭವಾದ ಮಳೆ ಸುಮಾರು ಅರ್ಧಗಂಟೆ ರಸ್ತೆಹೋಕರನ್ನು ನಿಂತಲ್ಲಿಯೇ ನಿಲ್ಲಿಸಿತ್ತು. ಸರಾಗ ವಾಹನ ಚಾಲನೆಗೆ ಅಡ್ಡಗಾಲು ಹಾಕಿತ್ತು.
ರಾಜ್ಯದ ದಕ್ಷಿಣ ಭಾಗದಲ್ಲಿಯೂ ಮಳೆ ತನ್ನಾಟವನ್ನು ಮುಂದುವರಿಸಿದೆ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಭರ್ಜರಿ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 8 ಸೆಂ.ಮೀ. ಮಳೆ ಬಿದ್ದಿದೆ. ಹಾಗೆಯೇ ಗುಂಡ್ಲುಪೇಟೆ, ಶ್ರೀನಿವಾಸಪುರ ಮತ್ತು ಚಾಮರಾಜನಗರದಲ್ಲಿಯೂ ತಲಾ 6 ಸೆಂ.ಮೀ. ಮಳೆಯಾಗಿದೆ.
***
ಭೂಲೋಕದ ಸ್ವರ್ಗ ಗಿಸ್ಬೋರ್ನ್ನಲ್ಲಿ ಭಾರೀ ಭೂಕಂಪ
ವೆಲ್ಲಿಂಗ್ಟನ್ : ಭೂಲೋಕದ ಸ್ವರ್ಗ ಎಂದೇ ಖ್ಯಾತಿಯಿರುವ ನ್ಯೂಜಿಲಂಡ್ನ ಗಿಸ್ಬೋರ್ನ್ನಲ್ಲಿ ಬುಧವಾರ ಭಾರೀ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 6.8ರಷ್ಟಿದ್ದು ಗಿಸ್ಪೋರ್ನ್ನಿಂದ 50 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿದೆ. ಭೂಕಂಪದಿಂದಾಗಿ ಸಾವುನೋವು ಸಂಭವಿಸಿದ ವರದಿ ಬಂದಿಲ್ಲ. ಸುನಾಮಿಯ ಎಚ್ಚರಿಕೆಯನ್ನೂ ನೀಡಲಾಗಿಲ್ಲ.
***
ಅಭ್ಯಾಸ ಪಂದ್ಯದಲ್ಲಿ ಎಡವಿದ ಭಾರತಕ್ಕೆ ಸೌರವ್ ಚೇತರಿಕೆ
ಮೆಲ್ಬೋರ್ನ್ : ಮಳೆಯಿಂದಾಗಿ ತಡವಾಗಿ ಆರಂಭವಾದ ವಿಕ್ಟೋರಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಚೇತರಿಕೆಯ ಆಟವಾಡಿದ್ದಾರೆ.
ಮೊದಲ ಸೆಷನ್ ಮಳೆಯಿಂದಾಗಿ ರದ್ದಾದ ನಂತರ ಆರಂಭವಾದ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಆರಂಭದಲ್ಲೇ ಎಡವಿತು. 38 ರನ್ ಗುಡ್ಡೆ ಹುಕುವಷ್ಟರಲ್ಲಿ ಮೂವರು ಪೆವಿಲಿಯನ್ಗೆ ಮರಳಿದ್ದರು. ನಂತರ ಆರಂಭಿಕ ಆಟಗಾರರಾಗಿ ಬಂದ ದ್ರಾವಿಡ್ರನ್ನು ಕೂಡಿದ ಸೌರವ್ ಭಾರತಕ್ಕೆ ಆಸರೆಯಾದರು. ದಿನದ ಕೊನಗೆ ಭಾರತ ಮೂರು ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತ್ತು.
ಆಸ್ಟ್ರೇಲಿಯಾ ವಾತಾವರಣಕ್ಕೆ ಹೊಂದಿಕೊಳ್ಳಲು ಪರದಾಡಿದ ಆರಂಭಿಕ ಆಟಗಾರರು ಅಷ್ಟೇನು ಖ್ಯಾತನಲ್ಲದ ಅಲನ್ ವೈಸ್ ಲೈನ್ ಅಂಡ್ ಲೆಂಗ್ತನ್ನು ಅಳಿಯಲಾಗದೆ ಪೆವಿಲಿಯನ್ಗೆ ಮರಳಿದರು. ಎಚ್ಚರಿಕೆಯ ಆಟವಾಡಿದ ಸೌರವ್ 51 ರನ್ ಮತ್ತು ಹೆಸರಿಗೆ ತಕ್ಕಂತೆ 'ವಾಲ್'ನಂತೆ ನಿಂತ ದ್ರಾವಿಡ್ 33 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ.
***
ದೆಹಲಿ ಹೈಕೋರ್ಟ್ಗೆ ಅಲ್ ಖೈದಾ ಬೆದರಿಕೆ
ನವದೆಹಲಿ : ಭಯೋತ್ಪಾದಕ ಸಂಘಟನೆ ಅಲ್ ಖೈದಾದಿಂದ ಬೆದರಿಕೆಯ ಈಪತ್ರ ಬಂದಿರುವುದಾಗಿ ದೆಹಲಿ ಹೈಕೋರ್ಟ್ ಹೇಳಿದೆ. ಪತ್ರದಲ್ಲಿ ಹೈಕೋರ್ಟ್ ನ್ಯಾಯಾಧೀಶರನ್ನಲ್ಲದೇ ಪಾರ್ಲಿಮೆಂಟ್ ಮತ್ತು ತಾಜಮಹಲನ್ನು ಕೂಡ ಉಡಾಯಿಸುವುದಾಗಿ ಬೆದರಿಕೆಯೊಡ್ಡಿದೆ. ಬೆದರಿಕೆಯ ಈಪತ್ರವನ್ನು ಗೃಹ ಸಚಿವಾಲಯಕ್ಕೆ ಕಳುಹಿಲಾಗಿದ್ದು, ಹೈಕೋರ್ಟ್ಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications