ಬಸವನಗುಡಿ: ಕಡ್ಲೇಕಾಯಿ ಪರಿಷೆಗೆ ಹೋಗೋಣ ಬನ್ನಿರೋ..
ಬೆಂಗಳೂರು, ಡಿ.3 : ಇಲ್ಲಿನ ಜನ, ಇಲ್ಲಿನ ಭಾಷೆ, ಉಡುಗೆ ತೊಡುಗೆ, ರೀತಿ ನೀತಿ ಇವೆಲ್ಲವೂ ಅನುಮಾನ ಹುಟ್ಟಿಸುತ್ತವೆ. ಒಂದೊಂದು ಸಲ ಬೆಂಗಳೂರಲ್ಲಿದ್ದೀವೋ, ಅಥವಾ ಇನ್ನೆಲ್ಲಾದರೂ ಪರದೇಶದಲ್ಲಿ ಇದ್ದೀವೋ ಎಂಬ ಅನುಮಾನ ಕಾಡುತ್ತೆ. ಇಂಥ ಅನುಮಾನಗಳಿಗೆ ತೆರೆ ಎಳೆದು, ಇದು ಬೆಂಗಳೂರೇ ಎಂದು ಮನವರಿಕೆ ಮಾಡಿಕೊಡುವ ಸಂಗತಿಗಳು ಕೆಲವು ಇದ್ದೇ ಇವೆ. ಆ ಸಂಗತಿಗಳಲ್ಲಿ ಬಸವನಗುಡಿಯ ಕಡ್ಲೆಕಾಯಿ ಜಾತ್ರೆ ಪ್ರಮುಖವಾದುದು.
ವಾರ್ಷಿಕ ಕಡ್ಲೆ ಕಾಯಿ ಪರಿಷೆ ಭಾನುವಾರ(ಡಿ.2)ದಿಂದ ಆರಂಭಗೊಂಡಿದೆ. ಸೋಮವಾರವೂ ಜಾತ್ರೆ ಸಂಭ್ರಮ ಮುಂದುವರೆದಿದೆ. ಸಾವಿರಾರು ಜನ, ಪರಿಷೆಯಲ್ಲಿ ಪಾಲ್ಗೊಂಡು ಕಡ್ಲೆಕಾಯಿ ಕೊಳ್ಳುತ್ತಾ ಆನಂದದಿಂದ ಸುತ್ತಾಡುತ್ತಿದ್ದಾರೆ. ಬೆಂಗಳೂರಿನ ಪುರಾತನ ಜಾತ್ರೆಯಾದ ಇದು, ಕೊನೆಯ ಕಾರ್ತಿಕ ಸೋಮವಾರ ನಡೆಯುತ್ತದೆ. ಮೊದಲ ದಿನವನ್ನು ಚಿಕ್ಕ ಪರಿಷೆಯೆಂದು, ಎರಡನೇ ದಿನವನ್ನು ದೊಡ್ಡ ಪರಿಷೆಯೆಂದು ಕರೆಯಾಗುತ್ತದೆ.
ಈ ಸಲದ ಜಾತ್ರೆಯಲ್ಲಿ ಸುಮಾರು 500ಕ್ಕೂ ಅಧಿಕ ರೈತರು ಮತ್ತು ವ್ಯಾಪಾರಿಗಳು ಪಾಲ್ಗೊಂಡಿದ್ದಾರೆ. ಮಸಾಲಾ ಕಡಲೆ ಕಾಯಿ, ಜ್ಯೂಸ್, ಐಸ್ ಕ್ರೀಮ್ ಸೇರಿದಂತೆ ಅನೇಕ ತಿಂಡಿ ಅಂಗಡಿಗಳು ತಲೆ ಎತ್ತಿವೆ. ಹತ್ತರಿಂದ ಹದಿನೈದರ ಬೆಲೆಗೆ ಕಿಲೋ ಕಡಲೆ ಕಾಯನ್ನು ಜನ ಖರೀದಿಸುತ್ತಿದ್ದಾರೆ. ದೊಡ್ಡ ಗಣೇಶ, ದೊಡ್ಡ ಬಸವಣ್ಣ ದೇವಸ್ಥಾನದ ಸುತ್ತಮುತ್ತ ಸಡಗರ ಮೇಳೈಸಿದೆ. ಇಲ್ಲಿನ ಬಸವಣ್ಣನಿಗೆ ಕಡ್ಲೇಕಾಯನ್ನು ನೈವೇದ್ಯವಾಗಿ ಅರ್ಪಿಸುವುದು ಪದ್ಧತಿ.
ಎರಡು ಕತೆಗಳು : 1537ರಲ್ಲಿ ಇಲ್ಲಿ ಬಸವಣ್ಣನ ದೇಗುಲ ತಲೆ ಎತ್ತಿತು. ಆಗ ಇಲ್ಲೆಲ್ಲ ಅರಣ್ಯವಿತ್ತು. ರೈತರ ಬೆಳೆಯನ್ನು ಪ್ರತೀ ಹುಣ್ಣಿಮೆ ದಿವಸ ಬಸವ ಬಂದು ಹಾಳು ಮಾಡುತ್ತಿತ್ತು. ಒಂದು ದಿನ ಈ ಸಂಗತಿ ರೈತರ ಗಮನಕ್ಕೆ ಬಂದು, ಮಾರನೇ ದಿನ ಎದ್ದು ನೋಡಿದರೆ ಬಸವ ಮೂರ್ತಿ ಉದ್ಭವವಾಗಿರುವುದು ಕಂಡು ಬಂತು. ಜನರು ಬಸವಣ್ಣನಿಗೆ ಹರಕೆ ಮಾಡಿಕೊಂಡು, ಆಶೀರ್ವಾದ ಕೋರಿದರು. ಆಮೇಲೆ ಜಾತ್ರೆ ರೂಢಿಗೆ ಬಂತು.ಮೊದಲ ಪೈರನ್ನು ಪೈಕಪು ಬಸವನಿಗೆ ಅರ್ಪಿಸುವ ಪರಿಪಾಠ ಮುಂದುವರೆದಿದೆ.
ಇನ್ನೊಂದು ಕತೆ : ಇಲ್ಲಿನ ಬಸವ(ವಿಗ್ರಹ) ಒಂದೇ ಸಮನೆ ಬೆಳೆಯ ತೊಡಗಿದ. ಬಸವನ ಮೇಲ್ಭಾಗಕ್ಕೆ ತ್ರಿಶೂಲ ಹಾಕಿ, ಗುಡಿ ನಿರ್ಮಾಣ ಮಾಡಿದ ಮೇಲೆ ಬೆಳವಣಿಗೆ ನಿಂತಿದೆ ಎಂಬುದು ಹಿರಿಯ ನಾಗರಿಕರ ನಂಬಿಕೆ. ಸುಮಾರು ಹದಿನೈದು ಅಡಿಗಳ ಬಸವನ ಏಕಶಿಲಾ ವಿಗ್ರಹ, ನೋಡುಗರಲ್ಲಿ ಭಕ್ತಿಭಾವ ಮೂಡಿಸುತ್ತದೆ.
ಬೆಂಗಳೂರು ಸ್ಪೆಷಲ್ಸ್ :
ತಾಜಾ ತಾಜಾ ಕಡಲೇ ಕಾಯಿ... | ಬೆಂಗಳೂರು ಪೇಟೆಯ ದೊಡ್ಡ ಗಣೇಶ | ಕರಗ ಎಂಬ ಮೂರಕ್ಷರದ ಸಂಭ್ರಮ












Click it and Unblock the Notifications