ಪ್ರಜಾವಾಣಿ ಮತ್ತು ಇತರ ಪತ್ರಕರ್ತರಿಂದ ಪ್ರತಿಭಟನೆ
- ಎಸ್ಕೆ.ಶಾಮಸುಂದರ.
ಬೆಂಗಳೂರು, ಡಿ.3 : ಆಧುನಿಕ ಸಾಮಾಜಿಕ ಜೀವನ ಪರಿಸರಕ್ಕೆ ಅನುಗುಣವಾಗಿ ವೇತನ ಪರಿಷ್ಕರಣೆ,ಆದಾಗುವವರೆಗೆ ತಾತ್ಕಾಲಿಕ ಪರಿಹಾರ ಘೋಷಣೆ ಇನ್ನು ಮುಂತಾದ ಬೇಡಿಕೆಗಳನ್ನು ಮುಂದೊಡ್ಡಿ ಬೆಂಗಳೂರು ವೃತ್ತ ಪತ್ರಿಕಾ ನೌಕರರ ಸಂಘ ಮತ್ತು ಡೆಕ್ಕನ್ ಹೆರಾಲ್ಡ್ ಹಾಗೂ ಪ್ರಜಾವಾಣಿ ಪತ್ರಕರ್ತರ ಸಂಘ ಸೋಮವಾರ(ಡಿ.3) ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದವು.
ಡೆಕ್ಕನ್ ಹೆರಾಲ್ಡ್ ಪ್ರಜಾವಾಣಿಯಲ್ಲದೆ ಟೈಮ್ಸ್ ಆಫ್ ಇಂಡಿಯಾ ಮತ್ತು ದಿ ಹಿಂದೂ ಪತ್ರಿಕೆಯ ಪತ್ರಕರ್ತರನ್ನೊಳಗೊಂಡ ಮೆರವಣಿಗೆ ಸೋಮವಾರ ಬೆಳಗ್ಗೆ ಎಂ . ಜಿ. ರಸ್ತೆಯಿಂದ ಆರಂಭವಾಗಿ ರಾಜಭವನದಲ್ಲಿ ಮುಕ್ತಾಯವಾಯಿತು.ಸಂಬಳ ಹೆಚ್ಚು ಮಾಡಿ, ತತ್ ಕ್ಷಣ ಮಧ್ಯಂತರ ಪರಿಹಾರ ಘೋಷಿಸಿ ಎಂದು ಕೂಗಿ ಹೇಳುವ ಸಲುವಾಗಿ ಸುಮಾರು 300ಮಂದಿ ಪತ್ರಕರ್ತರ ದಂಡು ಮೆರವಣಿಗೆಯಲ್ಲಿ ಜಮಾಯಿಸಿತ್ತು.
ಪತ್ರಕರ್ತ ಸಂಘಗಳ ಮುಖಂಡರು ರಾಜಭವನಕ್ಕೆ ತೆರಳಿ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರಿಗೆ ತಮ್ಮ ಸಮುದಾಯದ ಅಹವಾಲುಗಳನ್ನು ವಿವರಿಸುವ ಮನವಿ ಪತ್ರ ಸಲ್ಲಿಸಿದರು. ಕಾರ್ಮಿಕರಿಗೆ ಸಂಬಂಧಿಸಿದ ವಿಚಾರ ಆಗಿರುವುದರಿಂದ ತಾವು ಸ್ವೀಕರಿಸಿದ ಮನವಿ ಪತ್ರವನ್ನು ಕೇಂದ್ರದ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅವರಿಗೆ ರವಾನಿಸುವುದಾಗಿ ರಾಜ್ಯಪಾಲರು ಪತ್ರಕರ್ತರಿಗೆ ಭರವಸೆ ನೀಡಿದರು.
ಬೆಂಗಳೂರು ವೃತ್ತ ಪತ್ರಿಕಾ ನೌಕರರ ಸಂಘದ (BNEU) ಉಪಾಧ್ಯಕ್ಷ ಟಿ.ರಾಮಣ್ಣ, ಪ್ರಧಾನ ಕಾರ್ಯದರ್ಶಿ ಮುನಿಸಂಜೀವಯ್ಯ ಇನ್ನಿತರ ಪದಾಧಿಕಾರಿಗಳಾದ ಎನ್. ಶ್ರೀನಿವಾಸ್, ಶಂಕರ್ ವಿ, ಸುಂದರ ಮೂರ್ತಿ, ಎಸ್. ಎನ್. ನಿಂಗೇ ಗೌಡ ಹಾಗೂ ಡೆಕ್ಕನ್ ಹೆರಾಲ್ಡ್ ವತಿಯಿಂದ ( DPJU) ಜಂಟಿ ಕಾರ್ಯದರ್ಶಿ ಎಚ್.ಎಸ್. ರಾಮಾನುಜ, ಶಾಂತಾರಾಮ ಭಟ್ ಮತ್ತು ಶ್ರೀಕಂಠ ಶರ್ಮಾ ರಾಜ್ಯಪಾಲರನ್ನು ಭೇಟಿ ಮಾಡಿದ ನಿಯೋಗದಲ್ಲಿದ್ದರು. ಡಿಪಿಜೆಯು ಅಧ್ಯಕ್ಷ ಮತ್ತು ಪತ್ರಕರ್ತರ ಹಕ್ಕುಗಳಿಗಾಗಿ ಹೋರಾಡುವ ಡೆಕ್ಕನ್ ಹೆರಾಲ್ಡ್ ಉದ್ಯೋಗಿ ವಿ. ಚಂದ್ರಶೇಖರ್ (ಶೇಖರ್ ಪೂರ್ಣ) ಅವರು ನಿಯೋಗದಲ್ಲಿ ಇರಲಿಲ್ಲ.
ಸ್ವಾತಂತ್ರ್ಯ ಬಂದು 60 ವರ್ಷಗಳಾಗಿದ್ದರೂ ಪತ್ರಕರ್ತರ ಸಂಬಳ ಸಾರಿಗೆ ಪರಿಷ್ಕರಣೆಗೆ ರಚಿಸಲಾಗಿರುವ ವೇತನಮಂಡಳಿ ಬರೀ ಆರು. ( 1958ರಿಂದ ಈಚೆಗೆ ರಚನೆಯಾದದ್ದು ನಾಲಕ್ಕು :ಪಾಲೇಕರ್, ಬಚಾವತ್, ಮನ್ಸಾನಿ ಮತ್ತು ಈಚೆಗೆ ನ್ಯಾಯಮೂರ್ತಿ ನಾರಾಯಣ ಕುರುಪ್ ). ಭಾರತೀಯ ಪತ್ರಿಕಾರಂಗ ಗಾತ್ರದಲ್ಲಿ ಮತ್ತು ಪಾತ್ರದಲ್ಲಿ ಅಗಾಧವಾಗಿ ಬೆಳೆದಿದೆ. ಪತ್ರಿಕೆಯ ಬಹುತೇಕ ಎಲ್ಲ ವಿಭಾಗಗಳಲ್ಲಿ ತಂತ್ರಜ್ಞಾನ ಆವರಿಸಿಕೊಂಡಿದೆ. ಆದರೆ, ಈ ಬೆಳವಣಿಗೆಗೆ ಅಥವಾ ಅಭಿವೃದ್ಧಿಗೆ ಸರಿಸಮಾನವಾಗಿ ಪತ್ರಕರ್ತರ ವರಮಾನ ಏರಿಲ್ಲ ಎನ್ನುವುದು ಅಳಿದುಳಿದ ಪತ್ರಕರ್ತರ ಸಂಘಗಳ ವಿಷಾದ. ಅಂದಹಾಗೆ, ರಾಜ್ಯದ ಮುಂಚೂಣಿ ಪತ್ರಿಕಾ ಸಂಸ್ಥೆ ಡೆಕ್ಕನ್ ಹೆರಾಲ್ಡ್ ಪತ್ರಿಕಾ ಬಳಗಕ್ಕೆ ವಯಸ್ಸು ಆರುವತ್ತಾಯಿತು)
ನ್ಯಾಯಮೂರ್ತಿ ನಾರಾಯಣ ಕುರುಪ್ ಅವರ ನೇತೃತ್ವದ ನಾಲಕ್ಕನೆ ವೇತನ ಮಂಡಳಿ ( ಪತ್ರಕರ್ತರು ಮತ್ತು ಪತ್ರಿಕಾ ರಂಗದ ನೌಕರರಿಗಾಗಿ) ರಚನೆಯಾಗಿ ಒಂದುವರೆ ವರ್ಷವಾಗಿದೆ. ಮುಂದಿನ ಮೂರು ವರ್ಷದ ಒಳಗೆ ತಮ್ಮ ಶಿಫಾರಸ್ಸುಗಳನ್ನು ಸಲ್ಲಿಸಬೇಕೆಂದು ಕೇಂದ್ರ ಸರಕಾರ ವೇತನ ಮಂಡಳಿಯ ಅಧ್ಯಕ್ಷರನ್ನು ಕೇಳಿಕೊಂಡಿದೆ. ಆ ಕೋರಿಕೆಯನ್ನು ಕುರುಪ್ ಅವರು ಒಪ್ಪಿಕೊಂಡಿದ್ದಾರೆ. ಆದರೆ, ಶಿಫಾರಸು ಸಲ್ಲಿಕೆ, ಶಿಫಾರಸು ಅನುಮೋದನೆ ಮತ್ತು ಪರಿಷ್ಕೃತ ವೇತನ ವಿತರಣೆ ಆಗುವತನಕ ತಮಗೆ ಮಧ್ಯಂತರ ಪರಿಹಾರ ಕೊಡಿ ಎನ್ನುವುದು ಭಾರತೀಯ ಪತ್ರಿಕೋದ್ಯೋಗಿಗಳ ಹಾಗೂ ಪತ್ರಕರ್ತರ ಆಗ್ರಹವಾಗಿದೆ.












Click it and Unblock the Notifications