ವಿದ್ಯಾರ್ಥಿ ಚಳವಳಿಯಲ್ಲಿ ಒಡಕು;ಇಮ್ರಾನ್ ಖಾನ್ ಬಂಧನ
ಇಸ್ಲಾಮಾಬಾದ್, ನ. 14 : ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿರುವುದರ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸಿ ಆಂದೋಳನ ಮಾಡುವ ಸನ್ನಾಹದಲ್ಲಿದ್ದ ಹಳೆ ಕ್ರಿಕೆಟಿಗ ಹೊಸ ರಾಜಕಾರಣಿ ಇಮ್ರಾನ್ ಖಾನ್ ಅವರನ್ನು ಬುಧವಾರ(ನ.14) ಪಾಕ್ ಪೊಲೀಸರು ಬಂಧಿಸಿದ್ದಾರೆ.
ತಲೆಮರೆಸಿಕೊಂಡು ಭೂಗತ ಚಳವಳಿಯಲ್ಲಿ ತೊಡಗಿದ್ದ ಇಮ್ರಾನ್, ಇಂದು ಲಾಹೋರ್ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಪ್ರತ್ಯಕ್ಷವಾದ ತಕ್ಷಣ ಬಂಧನಕ್ಕೀಡಾದರು. ಜನರಲ್ ಮುಷರಫ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಕೂಡಲೇ ಅಂದರೆ ನವೆಂಬರ್ 3ರಿಂದ ಖಾನ್ ಪೊಲೀಸರ ಕಣ್ಣು ತಪ್ಪಿಸಿ ಅಲೆಯುತ್ತಿದ್ದರು. ಭೂಗತರಾಗಿದ್ದುಕೊಂಡು ಜನಾಂದೋಳನದ ಸೂತ್ರಗಳನ್ನು ಹೆಣೆಯುತ್ತಿದ್ದರು.
ತಮ್ಮ ಬಂಧನಕ್ಕೆ ಇಸ್ಲಾಮಿ ಜಮೈತ್ ತುಲೇಬ ವಿದ್ಯಾರ್ಥಿ ಸಂಘಟನೆ ( ಜಮತ್-ಇ-ಇಸ್ಲಾಮಿ ಸಂಘಟನೆಯ ವಿದ್ಯಾರ್ಥಿ ಪರಿಷತ್) ಕಾರಣ ಎಂದು ಖಾನ್ ಹೇಳಿದ್ದಾರೆ. "ನೀವು ಇಲ್ಲಿಗೆ ಬಂದರೆ ಕ್ಷೇಮ, ನಿಮಗೆ ಯಾವ ತೊಂದರೆಯೂ ಆಗುವುದಿಲ್ಲ" ಎಂದು ಲಾಹೋರ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಈ ಮುಂಚೆ ಇಮ್ರಾನ್ ಖಾನ್ ಅವರಿಗೆ ಆಶ್ವಾಸನೆ ಕೊಟ್ಟಿದ್ದರು.
ಆದರೆ, ಇಸ್ಲಾಮಿ ಜಮೈತ್ ತುಲೇಬ ವಿದ್ಯಾರ್ಥಿಗಳು ಸ್ಥಳೀಯ ಆಡಳಿತದೊಂದಿಗೆ ಹೊಂಚು ಹಾಕಿ ತಮ್ಮನ್ನು ಒಳಗೆ ಹಾಕಿಸಿದರೆಂದು ಖಾನ್ ಹೇಳಿದರು. ತಮ್ಮ ಬಂಧನವಾಗಿದ್ದರೂ ಕೂಡ ವಿದ್ಯಾರ್ಥಿಗಳನ್ನು ಚಳವಳಿಗೋಸ್ಕರ ಕಲೆಹಾಕುವ ಉದ್ದೇಶ ಫಲಿಸಿದೆ ಎಂದು ಇಮ್ರಾನ್ ಹೇಳಿರುವುದಾಗಿ ಸ್ಥಳೀಯ ಪತ್ರಿಕೆಗಳು ವರದಿಮಾಡಿಕೊಂಡಿವೆ.
(ಯುಎನ್ ಐ)