ಮುಖ್ಯಮಂತ್ರಿ ಗಾದಿಯಲ್ಲಿ ಯಡಿಯೂರಪ್ಪ ಪ್ರತಿಷ್ಠಾಪನೆ
ಬೆಂಗಳೂರು, ನ.12 : ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಸೋಮವಾರ(ನ.12)ಮಧ್ಯಾಹ್ನ 12.00ಕ್ಕೆ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ರಾಮೇಶ್ವರ ಠಾಕೂರು ಪ್ರಮಾಣ ವಚನ ಬೋಧಿಸಿದರು.
ವಿಧಾನಸೌಧದ ಮುಂಭಾಗ ನಡೆದ ಸಮಾರಂಭದಲ್ಲಿ ಸುಮಾರು 20ಸಾವಿರಕ್ಕೂ ಅಧಿಕ ಜನರು ಹಾಜರಿದ್ದರು. ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲೆಯಿಂದ ಯಡಿಯೂರಪ್ಪ ಅವರ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಶಿಕಾರಿಪುರ ಒಂದರಿಂದಲೇ 300ವಾಹನಗಳಲ್ಲಿ ಜನರು ಆಗಮಿಸಿದ್ದರು.
ರಾಜ್ಯದ ರೈತರು ಮತ್ತು ಭಗವಂತನ ಹೆಸರಲ್ಲಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ವೆಂಕಯ್ಯ ನಾಯ್ದು, ಯಶವಂತ್ ಸಿನ್ಹಾ, ರಾಜನಾಥ ಸಿಂಗ್, ನರೇಂದ್ರ ಮೋದಿ, ಅನಂತಕುಮಾರ್ ಸಮಾರಂಭದಲ್ಲಿ ಹಾಜರಿದ್ದರು. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು ಹಾಜರಿದ್ದರು. ದೇವೇಗೌಡರ ಗೈರು ಹಾಜರಿದ್ದರು.
ಇನ್ನಷ್ಟು ವಿಚಾರಗಳು :
*ಪ್ರತಿಪಕ್ಷದಲ್ಲಿರುವ ಕಾಂಗ್ರೆಸ್ ಪಕ್ಷದ ಮುಖಂಡರು ಗೈರು. ಈ ದಿನವನ್ನು ಕರಾಳ ದಿನವಾಗಿ ಕಾಂಗ್ರೆಸ್ ಆಚರಿಸಿತು.
*ವೈಯಕ್ತಿಕ ಕಾರಣಗಳಿಂದ ದೇವೇಗೌಡ ಸಹಾ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗಲಿಲ್ಲ.
*ಈ ದಿನ ಅತಿ ಸಂತಸದ ದಿನ. ದಕ್ಷಿಣ ಭಾರತದಲ್ಲಿ ಬಿಜೆಪಿ ಖಾತೆ ಆರಂಭವಾಗಿದೆ. ಇನ್ನೆಲ್ಲವೂ ಶುಭಂ : ಎಲ್.ಕೆ.ಆಡ್ವಾಣಿ
*ಪ್ರಮುಖ ಜಾತಿಗಳನ್ನು ಪ್ರತಿನಿಧಿಸುವಂತೆ ಅಶೋಕ್(ಒಕ್ಕಲಿಗ), ವಿ.ಎಸ್.ಆಚಾರ್ಯ(ಬ್ರಾಹ್ಮಣ), ಜಗದೀಶ್ ಶೆಟ್ಟರ್(ವೀರಶೈವ), ಕಾರಜೋಳ(ಪರಿಶಿಷ್ಟ ಜಾತಿ)ಸಚಿವರಾಗಿ ಅಧಿಕಾರ ಸ್ವೀಕಾರ.
*ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಿಲ್ಲ ಎಂದಿದ್ದ ಸೋಮಯಾಜಿ ಸೇರಿದಂತೆ ಪ್ರಮುಖ ಜ್ಯೋತಿಷಿಗಳ ಭವಿಷ್ಯ ಇಂದು ಸುಳ್ಳಾಯಿತು.
*ಯಡಿಯೂರಪ್ಪ ನಿವಾಸದಲ್ಲಿ ಇಂದು ಬೆಳಗ್ಗೆ ಶತ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ.
*ಪ್ರಮಾಣ ವಚನ ಸಮಾರಂಭದಲ್ಲಿ ಅನಿಲ್ ಕುಂಬ್ಳೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ-
ನೂತನ ಮುಖ್ಯಮಂತ್ರಿ ಯಡಿಯೂರಪ್ಪನವರ ಬಯೋಡಾಟ!
ಖ್ಯಾತ ಜ್ಯೋತಿಷಿಗಳ ಭವಿಷ್ಯ ಸುಳ್ಳು ಮಾಡಿ ಪಟ್ಟಕ್ಕೇರುತ್ತಿದೆ ಬಿಜೆಪಿ












Click it and Unblock the Notifications