ಪೌರುಷ ಪ್ರದರ್ಶನ ಮಾಡಲು ಹೋಗಿ ಫಜೀತಿಗೆ ಸಿಲುಕಿದ ಡಿಕೆಶಿ
ಬೆಂಗಳೂರು, ನ.09 : ಬಿಜೆಪಿ ಸಂಸದ ಅನಂತಕುಮಾರ್ ವಿರುದ್ಧ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಮಾಡಿರುವ ಟೀಕೆ, ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಈಗಾಗಲೇ ಶಿವಕುಮಾರ್ ವಿರುದ್ಧ ಬಿಜೆಪಿ ನಾಯಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಏನೇ ಆಗಲೀ, ಪ್ರಾಣವೇ ಹೋಗಲಿ ನಾನಂತೂ ಕ್ಷಮೆ ಕೇಳುವುದಿಲ್ಲ.. ಹೇಳಿಕೆ ವಾಪಸ್ ಪಡೆಯುವುದಿಲ್ಲ ಎಂಬ ಬಿಗಿ ಪಟ್ಟನ್ನು ಡಿ.ಕೆ.ಶಿವಕುಮಾರ್ ಸಡಿಲಿಸಿಲ್ಲ. ಇವರು ಕ್ಷಮೆ ಯಾಚಿಸುವ ತನಕ ನಾವು ಸುಮ್ಮನಿರುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ರಾಜ್ಯವ್ಯಾಪಿ ನಡೆಸುತ್ತಿದ್ದಾರೆ. ಕ್ಷಮೆ ಕೇಳಿದರೆ, ಜನ ಮುಸಿಮುಸಿ ನಗುತ್ತಾರೆ.. ಕ್ಷಮೆ ಕೇಳದಿದ್ದರೇ ಇಲ್ಲದ ಫಜೀತಿ.. ಏನು ಮಾಡಬೇಕೆಂದು ಶಿವಕುಮಾರ್ ಅವರಿಗೆ ಹೊಳೆಯುತ್ತಿಲ್ಲ.
ಇಷ್ಟಕ್ಕೂ ಏನಿದು ಮಾತಿನ ಗದ್ದಲ? :
ಗಾಂಧಿ ಹೆಸರಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಆ ಗಾಂಧಿಗೂ, ಈ ಗಾಂಧಿಗೂ ಸಂಬಂಧವೇ ಇಲ್ಲ. ಸೋನಿಯಾ ಮತ್ತು ರಾಹುಲ್ ಗಾಂಧಿ ನಕಲಿ ಗಾಂಧಿಗಳು ಎಂದು ಅನಂತಕುಮಾರ್ ಇತ್ತೀಚೆಗೆ ಸಾರ್ವಜನಿಕ ಸಭೆಯಲ್ಲಿ ಗೇಲಿ ಮಾಡಿದ್ದರು.
ಈ ಬೆನ್ನಲ್ಲಿಯೇ ಅರಮನೆ ಮೈದಾನದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಪಕ್ಷದ ಜನಾಂದೋಲನ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್, ಬಿಜೆಪಿ ವಿರುದ್ಧ ಟೀಕೆಗಳ ಸುರಿಮಳೆ ಸುರಿಸಿದ್ದರು. ಸೋನಿಯಾ ಮತ್ತು ರಾಹುಲ್ ಗಾಂಧಿಯನ್ನು ನಕಲಿ ಗಾಂಧಿ ಎಂದಿರುವ ಚೆಡ್ಡಿ ಅನಂತಕುಮಾರ್ ಸಿಕ್ಕರೇ ಬಿಡಬೇಡಿ. ಅವರು ಎಲ್ಲೇ ಸಿಕ್ಕಲಿ ಅವರ ಶರ್ಟ್ ಮತ್ತು ಪ್ಯಾಂಟ್ ಕಳಚಿ ಎಂದು ಕಾರ್ಯಕರ್ತರಿಗೆ ಶಿವಕುಮಾರ್ ಕರೆ ನೀಡಿದ್ದರು.
(ದಟ್ಸ್ ಕನ್ನಡ ವಾರ್ತೆ)