ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಮೌನ ಒಪ್ಪಂದ : ಬಂಗಾರಪ್ಪ
ಬೆಂಗಳೂರು, ನ.09 : ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತವನ್ನು ಅಂತ್ಯಗೊಳಿಸಬಾರದಿತ್ತು. ಕಾಂಗ್ರೆಸ್ ಪಕ್ಷವೂ ಬಿಜೆಪಿಯನ್ನು ಓಲೈಸಲು ಈ ಯತ್ನ ನಡೆಸಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಯುಎನ್ಐ ಸುದ್ದಿಸಂಸ್ಥೆಯ ಪ್ರತಿನಿಧಿ ಜೊತೆ ಶುಕ್ರವಾರ(ನ.09) ಮಾತನಾಡುತ್ತಿದ್ದ ಅವರು, ಕರ್ನಾಟಕದ ವಿಷಯವನ್ನು ಇಟ್ಟುಕೊಂಡು ರಾಷ್ಟ್ರಮಟ್ಟದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್ ಮುಂದಾಗಿವೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸಂಘರ್ಷವನ್ನು ಗಮನಿಸಿದ ರಾಜ್ಯಪಾಲರು ಸ್ಥಿರ ಸರ್ಕಾರ ಸಾಧ್ಯವಿಲ್ಲ ಎಂದು ವರದಿ ನೀಡಿದ್ದಾರೆ. ಆದರೆ ಕೇಂದ್ರ ಈ ಅಂಶವನ್ನು ಪರಿಗಣಿಸದೇ, ರಾಷ್ಟ್ರಪತಿ ಆಡಳಿತವನ್ನು ಹಿಂದಕ್ಕೆ ಪಡೆದಿದೆ. ಬಿಜೆಪಿ ಸರ್ಕಾರ ರಚನೆಗೆ ಹಾದಿ ಸುಗಮಗೊಳಿಸಿದೆ. ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಎಡಪಕ್ಷಗಳು ವಿರೋಧ ವ್ಯಕ್ತಪಡಿಸಿ, ಯುಪಿಎ ವಿರುದ್ಧ ಸಮರಕ್ಕೆ ನಿಂತಿವೆ. ಈ ಹೊತ್ತಿನಲ್ಲಿ ಬಿಜೆಪಿ ಸಹಕಾರ ಪಡೆಯಲು ಕಾಂಗ್ರೆಸ್ ಮುಂದಾಗಿದೆ ಎಂದು ಬಂಗಾರಪ್ಪ ದೂರಿದರು.
ದೋಸ್ತಿ ಸರ್ಕಾರ ಮುರಿದು ಬಿದ್ದ ನಂತರ, ಯಾವುದೇ ಪಕ್ಷವೂ ಸರ್ಕಾರ ನಡೆಸಲು ಮುಂದೆ ಬಾರಲಿಲ್ಲ. ಹೀಗಾಗಿ ಕೂಡಲೇ ವಿಧಾನಸಭೆ ವಿಸರ್ಜಿಸಿ, ಚುನಾವಣೆ ಘೋಷಿಸಬೇಕಿತ್ತು. ಆದರೆ ಆ ರೀತಿ ಮಾಡಲಿಲ್ಲ ಎಂದು ಹೇಳಿದರು.
(ಯುಎನ್ಐ)