ರೇವಣ್ಣ ನಿಮ್ ಅಪ್ಪ ಏನ್ ಮಾಡ್ತಾ ಇದ್ದಾರೆ? : ಪೂಜಾರಿ
ಬೆಂಗಳೂರು, ಅ.31 : ರಾಜ್ಯಸಭಾ ಸದಸ್ಯ ಜನಾರ್ಧನ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದು,ಗೌಡರು ಕಳೆದ ಮೂರು ವರ್ಷಗಳಲ್ಲಿ ಎಷ್ಟು ದಿನ ಸಂಸತ್ತಿಗೆ ಬಂದಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಪೂಜಾರಿ ಏನು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರೇವಣ್ಣ ಇತ್ತೀಚೆಗೆ ಪ್ರಶ್ನಿಸಿದ್ದರು. ಈ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಪೂಜಾರಿ, ನಿಮ್ಮ ಅಪ್ಪ ಏನು ಮಾಡುತ್ತಿದ್ದಾರೆ? ಎಂದು ಮರುಪ್ರಶ್ನಿಸಿದ್ದಾರೆ. ಮುಂದುವರಿದ ಅವರು ಕಳೆದ ಮೂರು ವರ್ಷಗಳ ಸಂಸತ್ತಿನ ಅಧಿವೇಶನದಲ್ಲಿ ಎಷ್ಟು ಸಲ ಗೌಡರು ಭಾಗವಹಿಸಿದ್ದಾರೆ. ಎಷ್ಟು ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ. ಎಷ್ಟು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಗೌಡರ ವಿರುದ್ಧ ಹರಿಹಾಯ್ದರು.
ಹಾಸನ ಮತ್ತು ಮಂಗಳೂರು ನಡುವಿನ ರೈಲು ಸಂಚಾರ ವಿಳಂಬವಾಗುತ್ತಿರುವ ಬಗ್ಗೆ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಜೊತೆಗೆ ನಾವು, ಸಂಸತ್ತಿನಲ್ಲಿ ವಾಗ್ವಾದ ಮಾಡಿದ್ದೇವೆ. ಮತದಾರರು ಯಾವುದಾದರೂ ಒಂದು ಪಕ್ಷವನ್ನು ಆಯ್ಕೆ ಮಾಡಿದರೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬಹುದು. ಸಮ್ಮಿಶ್ರ ಸರಕಾರಗಳಿದ್ದಾಗ ಹಿಡಿತ ಸಾಧಿಸುವುದು ಕಷ್ಟ ಎಂದರು.
ಶಿರಾಡಿಘಾಟ್ ರಸ್ತೆ ಬಗ್ಗೆ ಗಮನ ಸೆಳೆದ ಪತ್ರಕರ್ತರು, ಭೂ ಸಾರಿಗೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಏನು ಮಾಡುತ್ತಿದ್ದಾರೆ? ಎಂದಾಗ, ಮುನಿಯಪ್ಪ ಸಂಪುಟ ದರ್ಜೆ ಸಚಿವರಲ್ಲ ಅವರ ಜೊತೆ ಮಾತನಾಡಿರುವುದಾಗಿ ಅವರಿಗೆ ಸರಿಯಾದ ಚುಚ್ಚುಮದ್ದು ಕೊಟ್ಟಿರುವುದಾಗಿ ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications