ಮಿಲಿಟರಿ ಗುಂಡಿನಿಂದ ಗಾಯಗೊಂಡಿದ್ದ ನಿಹಾರಿಕಾ ಚೇತರಿಕೆ
ಬೆಂಗಳೂರು, ಅ.31 : ನಗರದ ಕೋರಮಂಗಲ ರಿಂಗ್ ರಸ್ತೆ ಬಳಿ ಗುಂಡೇಟಿನಿಂದ ಗಾಯಗೊಂಡಿದ್ದ ಸಾಫ್ಟ್ ವೇರ್ ಇಂಜಿನಿಯರ್ ನಿಹಾರಿಕಾ ಚೇತರಿಸಿಕೊಳ್ಳುತ್ತಿದ್ದಾರೆ. ಹೊಟ್ಟೆಯ ಎಡಭಾಗಕ್ಕೆ ಅಕಸ್ಮಾತ್ ಗುಂಡು ತಗಲಿದ್ದ ನಿಹಾರಿಕಾ ಅವರನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಘಟನೆ ವಿವರ : ಕೆಲದಿನಗಳ ಹಿಂದೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ , ಉತ್ತರಾಂಚಲದ ನೈನಿತಾಲ್ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ನಿಹಾರಿಕಾ ಜೀನಾ(27)ಅವರಿಗೆ, ರಿಂಗ್ ರಸ್ತೆ ಬಳಿ ನಿಗೂಢ ರೀತಿಯಲ್ಲಿ ಗುಂಡು ತಗುಲಿತ್ತು. ಸರ್ಜಾಪುರ ರಿಂಗ್ ರಸ್ತೆಯಿಂದ ಈಜಿಪುರ ಹಾಗೂ ಕೋರಮಂಗಲ ಇಂಟರ್ ಮಿಡಿಯೇಟ್ ರಿಂಗ್ ರಸ್ತೆವರೆಗೂ ಹಬ್ಬಿರುವ ಮಿಲಿಟರಿ ಕ್ಯಾಂಪ್ ನಲ್ಲಿ ಸೈನಿಕರು ತರಬೇತಿ ಸಮಯದಲ್ಲಿ ಹಾರಿಸಿರಬಹುದಾದ ಗುಂಡು ಆಕೆಗೆ ತಗುಲಿರುವ ಸಾಧ್ಯತೆಯಿದೆ ಎಂದು ವಿವೇಕನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಂ.ಎಸ್. ಕಾಕಂಡಕಿ ತಿಳಿಸಿದ್ದಾರೆ.
ಕಳೆದ 3 ವರ್ಷದಿಂದ ಈ ರೀತಿಯ ಘಟನೆ ಮೇಲಿಂದ ಮೇಲೆ ನಡೆದಿದ್ದರೂ, ಯಾರಿಗೂ ಪ್ರಾಣಾಪಾಯವಾಗಿಲ್ಲ. ಗುಂಡು ಮಿಲಿಟರಿ ಪಡೆಗೆ ಸೇರಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರೆ ಹೊರತು , ಖಚಿತಪಡಿಸಿಲ್ಲ ಎಂದು ಬ್ರಿಗೇಡಿಯರ್ ಕ್ಲೆಮೆಂಟ್ ಸ್ಯಾಮುಯಲ್ ಹೇಳಿದ್ದಾರೆ.
ಯಾವುದೇ ಮಾಹಿತಿ ಅಥವಾ ಎಚ್ಚರಿಕೆ ನೀಡದೆ ಮಿಲಿಟರಿಯವರು ನಡೆಸುತ್ತಿರುವ ತರಬೇತಿ ಶಿಬಿರದಿಂದ ಕೆಲವೊಮ್ಮೆ ಆಘಾತವಾಗುತ್ತಿದೆ ಎಂದು ಸುತ್ತಮುತ್ತಲ ಪ್ರದೇಶದ ನಾಗರಿಕರು ದೂರಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
[ ಓದುಗ ಪ್ರಭುಗಳ ಮುಂದೆ ತಪ್ಪೊಪ್ಪಿಗೆ : ಒಂದೊಂದು ಸಲ ಹೀಗಾಗುತ್ತದೆ. ನಿಹಾರಿಕಾ ಗುಂಡಿಗೆ ಬಲಿಯಾಗಿದ್ದಾಳೆ ಎಂಬ ಸುದ್ದಿಯನ್ನು ನಾವು ಬುಧವಾರ(ಅ.31) ಪ್ರಕಟಿಸಿದ್ದೆವು. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಆದ ತಪ್ಪಲ್ಲ. ಸುದ್ದಿಯನ್ನು ಖಚಿತಪಡಿಸಿಕೊಳ್ಳದೇ, ಅವಸರದಲ್ಲಿ ನಿಮಗೆ ತಪ್ಪು ಸುದ್ದಿ ನೀಡಿದ್ದಕ್ಕಾಗಿ ದಟ್ಸ್ ಕನ್ನಡ ವಿಷಾದಿಸುತ್ತದೆ. ]