ರಾಜ್ಯಪಾಲ ರಾಮೇಶ್ವರ ಠಾಕೂರು ಈಗ ಏನ್ ಮಾಡ್ತಾರೆ?
ಬೆಂಗಳೂರು, ಅ.29 : ವಿಧಾನಸಭೆ ಅಮಾನತ್ತಿನಲ್ಲಿ ಇರುವುದರಿಂದ ಮೈತ್ರಿ ಸರಕಾರಕ್ಕೆ ಅವಕಾಶ ನೀಡಬೇಕೆ ಬೇಡವೆ ಎಂಬ ಬಗ್ಗೆ ಕಾನೂನು ತಜ್ಞರಲ್ಲಿ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ.
ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಮತ್ತು ಬಿಹಾರದ ರಾಮೇಶ್ವರ್ ದಯಾಳ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನ್ವಯ ಬಿಜೆಪಿ ಜೆಡಿಎಸ್ ಸರಕಾರ ರಚಿಸಲು ಅವಕಾಶ ನೀಡಲೇ ಬೇಕಾಗುತ್ತದೆ ಎಂಬ ವಾದ ಕೇಳಿಬರುತ್ತಿದೆ. ಆದರೆ ವಾಸ್ತವ ವಿಷಯ ಬೇರೆಯೇ ಇದೆ. ಇಲ್ಲಿ ಬಹುಮತ ಸಾಬೀತುಪಡಿಸಲು ಅವಕಾಶ ನೀಡದೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ರಾಜ್ಯದ ಪರಿಸ್ಥಿತಿಯೇ ಬೇರೆ. ಹಾಗಾಗಿ ಸುಪ್ರೀಂ ಕೋರ್ಟ್ನ ತೀರ್ಪು ರಾಜ್ಯದ ಪ್ರಕರಣಕ್ಕೆ ಅನ್ವಯವಾಗಲೇ ಬೇಕು ಅನ್ನುವಂತಿಲ್ಲ.
ಏನಾಗಬಹುದು?
ರಾಜಕಾರಣಿಗಳ ದಿನಕ್ಕೊಂದು ರೀತಿಯ ಹೇಳಿಕೆಯಿಂದ ಗೊಂದಲದ ವಾತಾವರಣ ನಿರ್ಮಾಣವಾಗಿರುವುದರಿಂದ ವಿಧಾನಸಭೆ ವಿಸರ್ಜಿಸಿ, ರಾಷ್ಟ್ರಪತಿ ಆಡಳಿತ ಮುಂದುವರೆಸಲು ಕೇಂದ್ರಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬಹುದು.
ಸರಕಾರ ರಚನೆಗೆ ಮುಂದಾಗದೆ ವಿಧಾನಸಭೆಯನ್ನು ಅಮಾನತ್ತಿನಲ್ಲಿ ಇಟ್ಟಿರುವ ಸಂದರ್ಭ ಇದುವರೆಗೂ ಬಂದಿರಲಿಲ್ಲ. ವಿಧಾನಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಸರ್ಕಾರ ಇನ್ನೂ ನಿಶ್ಚಯಿಸಿಲ್ಲ. ಸರಕಾರ ರಚನೆಗೆ ಅವಕಾಶ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದೆ.
ಬೊಮ್ಮಾಯಿ ಪ್ರಕರಣ ಮತ್ತು ಬಿಹಾರದ ವಿದ್ಯಮಾನಗಳಲ್ಲಿ ಜನಪ್ರತಿನಿಧಿಗಳ ಅಧಿಕಾರವನ್ನು ಕಿತ್ತುಕೊಂಡು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದರು. ಆದರೆ ರಾಜ್ಯದ ಪರಿಸ್ಥಿತಿ ಪೂರ್ಣ ಭಿನ್ನವಾಗಿದೆ. ಬಹುಮತ ಸಾಬೀತುಪಡಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ರಾಜ್ಯಪಾಲರು ಯಾವುದೇ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಮುಕ್ತ ಅವಕಾಶವಿದೆ.
(ದಟ್ಸ್ಕನ್ನಡ ವಾರ್ತೆ)