ಖ್ಯಾತ ಜ್ಯೋತಿಷಿಗಳ ಭವಿಷ್ಯ ಸುಳ್ಳು ಮಾಡಿ ಪಟ್ಟಕ್ಕೇರುತ್ತಿದೆ ಬಿಜೆಪಿ
ಬೆಂಗಳೂರು, ಅ.27 : ಖ್ಯಾತ ಜ್ಯೋತಿಷಿ ದೈವಜ್ಞ ಕೆ.ಎನ್.ಸೋಮಯಾಜಿ ಹೇಳಿದ್ದ ಭವಿಷ್ಯ ಸುಳ್ಳಾಗಿದೆಯಾ?
ಜೀವಮಾನದಲ್ಲಿ ಇನ್ನೆಂದೂ ಬಿಜೆಪಿ ನಾಯಕ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಿಲ್ಲ, ಅವರಿಗೆ ಆ ಯೋಗವೂ ಇಲ್ಲ ಎಂದು ನುಡಿದಿದ್ದ ಶಕುನ ತಿರುಗು ಮುರುಗಾಗುವ ಸಾಧ್ಯತೆ ಕಂಡುಬರುತ್ತಿದೆ. ಯಾರೂ ನಿರೀಕ್ಷಿಸದಿದ್ದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ನ ಬೆಂಬಲದೊಂದಿಗೆ ಯಡಿಯೂರಪ್ಪ ಸರ್ಕಾರ ರಚಿಸಲು ಅನುವಾಗಿದ್ದಾರೆ.
ಧರಂಸಿಂಗ್ ಸರಕಾರದ ಪತನದ ಬಗ್ಗೆ ಸೋಮಯಾಜಿ ಭವಿಷ್ಯ ನುಡಿದಿದ್ದರು. ಅವರಂದಂತೆ ಅವರು ಹೇಳಿದ ಸಮಯದ ಆಸುಪಾಸಿನಲ್ಲಿ ಧರಂ ಸರ್ಕಾರ ಪತನಗೊಂಡಿತ್ತು. ಕುಮಾರಸ್ವಾಮಿ ನಾಯಕತ್ವದ ಜೆಡಿಎಸ್ ಪಕ್ಷ ಅಕ್ಟೋಬರ್ 3ರಂದು ಬಿಜೆಪಿಗೆ ಕೈಕೊಟ್ಟನಂತರ ಯಡಿಯೂರಪ್ಪ ಜಾತಕದಲ್ಲಿ ರಾಜ್ಯವನ್ನು ಮುನ್ನಡೆಸುವ ಯೋಗವೇ ಇಲ್ಲ ಎಂದೂ ಸೋಮಯಾಜಿ ಭವಿಷ್ಯ ನುಡಿದಿದ್ದರು.
ಇದರೊಂದಿಗೆ ಫೆಬ್ರವರಿಯಲ್ಲಿ ಮತ್ತೆ ಚುನಾವಣೆ ನಡೆದು ರಾಜಕೀಯ ಪಕ್ಷವೊಂದು ನಿಚ್ಚಳ ಬಹುಮತದಿಂದ ಸರ್ಕಾರ ರಚಿಸಲಿದೆ ಎಂದೂ ಸೋಮಯಾಜಿ ನುಡಿದಿದ್ದರು.
ಭವಿಷ್ಯವನ್ನು ಅಪಾರವಾಗಿ ನಂಬುವ ಕುಮಾರಸ್ವಾಮಿ ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು, ಭವಿಷ್ಯಕಾರರ ನುಡಿಮುತ್ತುಗಳನ್ನು ಬುಡಮೇಲು ಮಾಡಿ ತಾವೇ ಭವಿಷ್ಯ ಬರೆಯಲು ಹೊರಟಿದ್ದಾರೆ. ಯಡಿಯೂರಪ್ಪನವರನ್ನು ಗದ್ದುಗೆಯ ಮೇಲೆ ಕುಳ್ಳಿರಿಸಲು ಸಮ್ಮತಿಸಿದ್ದಾರೆ. ಜ್ಯೋತಿಷ್ಯ ನಂಬಿ ಕೆಟ್ಟೆ ಎಂದು ಪ್ರಲಾಪಿಸುತ್ತಿದ್ದ ಎಚ್.ಡಿ.ರೇವಣ್ಣ ಈಗ ಮತ್ತೆ ನಗುತ್ತಿದ್ದಾರೆ.
ಕುಮಾರಸ್ವಾಮಿ ಕೈ ಎತ್ತಿದ ನಂತರ ಸೋಮಯಾಜಿ ಅವರನ್ನು ಭೇಟಿ ಮಾಡಿದ್ದ ಯಡಿಯೂರಪ್ಪ ನಂತರ ಪೆಚ್ಚು ಮೋರೆ ಹಾಕಿಕೊಂಡು ಹೊರಬಂದಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಚುಕ್ಕಾಣಿ ಹಿಡಿಯುವುದು ಕಷ್ಟ ಎಂದು ಹೇಳಿ ಸೋಮಯಾಜಿ ಯಡಿಯೂರಪ್ಪನವರನ್ನು ಸಾಗಹಾಕಿದ್ದರು.
ಕುಮಾರಸ್ವಾಮಿ ಸಂಧಿಸಿದ್ದ ರಮೇಶ್ ಬೈರಿ ಮತ್ತು ಯಡಿಯೂರಪ್ಪನವರು ಸಂಧಿಸಿದ್ದ ದೈವಜ್ಞ ಸೋಮಯಾಜಿ ಈಗ ಏನು ಭವಿಷ್ಯ ಹೇಳುತ್ತಾರೋ ಕಾದು ನೋಡಬೇಕು. ಈ ಮಧ್ಯೆ ಏನಾದರೂ ನಡೆದು, ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡದಿದ್ದರೆ ಮತ್ತೆ ಜ್ಯೋತಿಷಿಗಳು ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುತ್ತಾರೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು.
(ದಟ್ಸ್ಕನ್ನಡ ವಾರ್ತೆ)